ಕೆ.ಆರ್.ಪುರ: ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಬಲಿಷ್ಠವಾಗಿ ಕಟ್ಟುವ ಉದ್ದೇಶದಿಂದ ರಾಜ್ಯಾದ್ಯಂತ ಸಂಘಟನ್ ಸೃಜನ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಪಕ್ಷದ ಸಂಘಟನೆ ಪ್ರಜಾಸತ್ತಾತ್ಮಕ ರೀತಿಯಲ್ಲಿ ಮತ್ತಷ್ಟು ಸದೃಢಗೊಳ್ಳಬೇಕಿದೆ ಎಂದು ಎಐಸಿಸಿ ವೀಕ್ಷಕರಾದ ಟೋನಿ ಚಮ್ಮನಿ ತಿಳಿಸಿದರು.

ಕೆ.ಆರ್. ಪುರದ ಖಾಸಗಿ ಹೋಟೆಲ್ನಲ್ಲಿ ಆಯೋಜಿಸಿದ್ದ ಸಂಘಟನ್ ಸೃಜನ ಅಭಿಯಾನ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕ ಹಾಗೂ ಪ್ರಜಾಸತ್ತಾತ್ಮಕವಾಗಿ ನಡೆಯಲಿದೆ. ಪಕ್ಷದ ಪದಾಧಿಕಾರಿಗಳು ಮತ್ತು ಮುಖಂಡರ ವೈಯಕ್ತಿಕ ಅಭಿಪ್ರಾಯಗಳನ್ನು ಗೌರವದಿಂದ ಆಲಿಸಿ, ಅವುಗಳನ್ನು ರಾಷ್ಟ್ರೀಯ ನಾಯಕತ್ವಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಆಗಸ್ಟ್ 31ರೊಳಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಪೂರ್ಣಗೊಳ್ಳಲಿದ್ದು, ಸಂಘಟನೆಯ ಬಲವರ್ಧನೆಗೆ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು. ಈ ಉದ್ದೇಶದಿಂದ ಸಂಘಟನಾ ಸೃಜನ್ ಅಭಿಯಾನದ ಮೂಲಕ ಮಹದೇವಪುರ ಹಾಗೂ ಕೆ.ಆರ್.ಪುರ ಕ್ಷೇತ್ರಗಳ ಜನಪ್ರತಿನಿಧಿಗಳು, ಮುಖಂಡರು, ಕಾರ್ಯಕರ್ತರ ಅಭಿಪ್ರಾಯವನ್ನು ಪಡೆಯಲಾಗುತ್ತದೆ ಎಂದು ಹೇಳಿದರು.
ಬ್ಲಾಕ್ ಅಧ್ಯಕ್ಷರ ಕಚೇರಿಯಲ್ಲಿ ಒಬ್ಬೊಬ್ಬರನ್ನೇ ನೇರ ವಾಗಿ ಮಾತನಾಡಿಸಿ ಅವರ ಅಭಿಪ್ರಾಯ ಪಡೆದು ವರದಿ ಯನ್ನು ಎಐಸಿಸಿಗೆ ಕಳುಹಿಸಲಾಗುತ್ತದೆ ಎಂದು ತಿಳಿಸಿದರು
ಮಾಜಿ ಸಚಿವ ಡಾ.ಸುಧಾಕರ್ ಮಾತನಾಡಿ,ದುಡಿಯುವವರು ಒಬ್ಬರು, ಅಧಿಕಾರ ಅನುಭವಿಸುವವರು ಮತ್ತೊಬ್ಬರು ಎಂಬಂತಾಗಬಾರದು ಎನ್ನುವ ಕಾರಣಕ್ಕೆ ಪಕ್ಷ ಸಂಘಟನೆಯಲ್ಲಿ ಸೃಜನಾತ್ಮಕವಾಗಿ ತೊಡಗಿಸಿಕೊಂಡವರನ್ನು ಇಂತಹ ಸಭೆಗಳ ಮೂಲಕ ಗುರುತಿಸಿ ಪಕ್ಷದ ವರಿಷ್ಠರಿಗೆ ವರದಿ ನೀಡಲಾಗುತ್ತದೆ. ಆಗಸ್ಟ್ ಅಂತ್ಯದ ಒಳಗೆ ಜಿಲ್ಲೆ, ತಾಲ್ಲೂಕು ಘಟಕದ ಅಧ್ಯಕ್ಷರ ಆಯ್ಕೆ ನಡೆಯಲಿದೆ’ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಬೆಂಗಳೂರು ಪೂರ್ವ ಜಿಬಿಎ ಜಿಲ್ಲಾಧ್ಯಕ್ಷ ಡಿ.ಕೆ.ಮೋಹನ್ ಬಾಬು, ಮಾಜಿ ಸಚಿವ ನಾಗೇಶ್, ಪರಿಶಿಷ್ಟ ಪಂಗಡದ ರಾಜ್ಯಾಧ್ಯಕ್ಷ ಧರ್ಮಸೇನ, ಕೆಪಿಸಿಸಿ ಪ್ರ.ಕಾರ್ಯದರ್ಶಿ ನಲ್ಲೂರಹಳ್ಳಿ ನಾಗೇಶ್, ಕೆಪಿಸಿಸಿ ಸದಸ್ಯರಾದ ಮಾರತ್ತಹಳ್ಳಿ ಜಯರಾಂರೆಡ್ಡಿ, ಜ್ಯೋತಿಪುರ ಚಂದ್ರು, ಬ್ಲಾಕ್ ಅಧ್ಯಕ್ಷರಾದ ಕಣ್ಣೂರು ನಾರಾಯಣಸ್ವಾಮಿ, ಮಯಾಂಕ್ ಬಾಬು, ಶ್ರೀನಿವಾಸ್ ರೆಡ್ಡಿ ಮುಖಂಡರಾದ ಜಾಯ್ಸನ್ ಬಾಲರಾಜ್ ಪಟೇಲ್ ಸೇರಿದಂತೆ ಇತರರು ಇದ್ದರು.