ಗದಗ: ಜಿಲ್ಲೆಯ ನರಗುಂದ ತಾಲೂಕಿನ ಹಿರೆಕೊಪ್ಪ ಗ್ರಾಮದ ಹೊರ ವಲಯದ ಜಮೀನಿನಲ್ಲಿ ಒಂದು ಹೆಣ್ಣಿಗಾಗಿ ಒಡ ಹುಟ್ಟಿದ ಸಹೋದರನನ್ನೆ ಅಣ್ಣನು ಕೊಲೆ ಮಾಡಿದ ಘಟನೆ ಕಳೆದ ಮಾ.17 ರಂದು ಮಂಗಳವಾರ ಬೆಳಗಿನ ಜಾವದಲ್ಲಿ ನಡೆದಿದೆ.
ಫಕ್ಕೀರಪ್ಪ ಎಂಬ ಯುವಕನು ಕೊಲೆಗೀಡಾದ ದುರ್ಧೈವಿಯಾಗಿದ್ದು ಈತನ ಸಹೋದರ ಅಶೋಕ ಎಂಬಾತನು ಕೊಲೆ ಮಾಡಿದ ಪಾಪಿ ಅಣ್ಣನಾಗಿದ್ದಾನೆ.
ಮನೆಯಲ್ಲಿ ಇವರ ತಂದೆ-ತಾಯಿಗಳು ಈ ಇಬ್ಬರು ಮಕ್ಕಳ ಮದುವೆ ಮಾಡಬೇಕು ಎಂದು ಕನಸು ಹೊಂದಿರುತ್ತಾರೆ.ಪೋಷಕರ ಇಚ್ಚೆಯಂತೆ ಅಣ್ಣ-ತಮ್ಮ ಈ ಇಬ್ಬರೂ ಯುವಕರು ಕನ್ಯಾ ನೋಡಿ ಬಂದಿದ್ದಾರೆ.
ಅಣ್ಣನಿಗೆ ತಮ್ಮನು ನೋಡಿ ಬಂದ ಹುಡುಗಿಯ ಮೇಲೆ ಕಣ್ಣು ಬಿದ್ದಿದೆ. ಹೀಗಾಗಿ ಆ ಹುಡುಗಿಯನ್ನು ಮದುವೆ ಆಗಲು ತಮ್ಮನು ಅಡ್ಡಿ ಆಗುತ್ತಾನೆ ಎಂದು ತಿಳಿದು ಪಾಪಿ ಅಶೋಕನು ತನ್ನ ಒಡ ಹುಟ್ಟಿದ ತಮ್ಮನನ್ನೆ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ತದನಂತರ ಈತನೆ ಸ್ವತ: ಪೋಲೀಸರಿಗೆ ಕರೆ ಮಾಡಿ ಯಾರೋ ಕಿಡಿಗೇಡಿಗಳು ನನ್ನ ತಮ್ಮನನ್ನು ಹೊಡೆದು ಸಾಯಿಸಿದ್ದಾರೆ ಎಂದು ಮಾಹಿತಿ ನೀಡುವ ಮೂಲಕ ಸುಳ್ಳು ಕಥೆಯನ್ನು ಕಟ್ಟಿದ್ದಾನೆ.
ಆರೋಪಿಯ ಹೇಳಿಕೆಯಿಂದ ಅನುಮಾನಗೊಂಡ ಪೋಲೀಸರು ಡಾಗ್ ಸ್ಕ್ವಾಡ್ ಜೊತೆ ಘಟನೆಯ ಸ್ಥಳಕ್ಕೆ ಭೇಟಿ ನೀಡುವ ಮೂಲಕ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ನಾಯಿಯು ನೇರವಾಗಿ ಅಶೋಕನ ಬಳಿ ಬಂದು ನಿಂತಿದೆ.ಈ ಹಿನ್ನಲೆಯಲ್ಲಿ ಪೋಲೀಸರು ಕೂಡಲೆ ಆರೋಪಿಯನ್ನು ತಮ್ಮ ವಶಕ್ಕೆ ಪಡೆದುಕೊಂಡು ತನಿಖೆಯನ್ನು ಕೈಗೊಂಡಿದ್ದಾರೆ.
ಪೋಲೀಸರ ತನಿಖೆಯ ಸಂದರ್ಭದಲ್ಲಿ ಹುಡುಗಿಯ ವಿಚಾರವಾಗಿ ಫಕ್ಕೀರಪ್ಪನನ್ನು ಕೊಲೆ ಮಾಡಿರುವುದಾಗಿ ಆರೋಪಿ ಅಶೋಕನು ಒಪ್ಪಿಕೊಂಡಿದ್ದಾನೆ ಎಂದು ಮಾಹಿತಿ ಲಭ್ಯವಾಗಿದೆ.
