ಮಹದೇವಪುರ: ಬೆಂಗಳೂರು ಪೂರ್ವ ತಾಲ್ಲೂಕು ಮಹದೇವಪುರ ಕ್ಷೇತ್ರದ ಕಾಡುಗುಡಿ ಗ್ರಾಮದಲ್ಲಿ ಬ್ರಹ್ಮ ರಥೋತ್ಸವಕ್ಕೆ ಮಾಜಿ ಲೋಕಸಭಾ ಸದಸ್ಯ ಎಸ್. ಮುನಿಸ್ವಾಮಿ ಚಾಲನೆ ನೀಡಿದರು.
ರಥೋತ್ಸವದ ನಿಮಿತ್ತ ದೇವರಿಗೆ ಬೆಳಿಗ್ಗೆಯಿಂದಲೇ ವಿಶೇಷ ಪೂಜೆ, ಅಭಿಷೇಕ ಹೂವಿನ ಅಲಂಕಾರ ಸೇರಿದಂತೆ ವಿವಿಧ ಪೂಜೆಗಳು ನೆರವೇರಿದವು. ಶ್ರೀ ಪ್ರಸನ್ನ ನಂಜುಂಡೇಶ್ವರ ಸ್ವಾಮಿ
ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಹೊತ್ತು ಸಕಲ ವಾದ್ಯಗಳೊಂದಿಗೆ ತಂದು ರಥಕ್ಕೆ ಪ್ರದಕ್ಷಿಣೆ ಹಾಕಿಸಿ, ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಜಾತ್ರಾ ಮಹೊತ್ಸವದಲ್ಲಿ ಕಂಸಾಳೆ, ಡೊಳ್ಳುಕುಣಿತ, ತಮಟೆ, ಮಂಗಳವಾದ್ಯದ ತಂಡಗಳು ಮೆರವಣಿಗೆ ನಡೆದ ಬೀದಿಯುದ್ದಕ್ಕೂ ಪ್ರದರ್ಶನಗೊಂಡು ನೇರೆದಿದ್ದ ಭಕ್ತರಿಗೆ ಆಕರ್ಷಣೆಯಾಗಿತ್ತು.
ನೂರಾರು ಭಕ್ತರು ರಥವನ್ನು ಎಳೆಯುವ ಮೂಲಕ ಭಕ್ತಿ ಪರವಶತೆಯನ್ನು ವ್ಯಕ್ತಪಡಿಸಿದರು.ಶ್ರದ್ದೆ ಭಕ್ತಿಯಿಂದ ದೇವರನ್ನು ಪೂಜಿಸಿ ಹರಕೆ ಮಾಡಿಕೊಂಡರೆ ಭಗವಂತ ಈಡೇರಿಸುತ್ತಾನೆ ಎಂಬ ಪ್ರತೀತಿಯಿದೆ, ಸಂಜೆ ಗ್ರಾಮದ ದೇವರುಗಳ ಪಲ್ಲಕ್ಕಿ ಉತ್ಸವ, ಸಂಗೀತ ಸಂಜೆ, ರಸಮಂಜರಿ ಮತ್ತಿತರರ ಕಾರ್ಯಕ್ರಗಳು ಜರುಗಿದವು.
ರಥೋತ್ಸವಕ್ಕೆ ಚಾಲನೆ ಸಿಗುತ್ತಿದ್ದಂತೆ ಭಕ್ತರು ರಥಕ್ಕೆ ಬಾಳೆಹಣ್ಣು, ದವನ, ಹೂ, ಉಪ್ಪು ಮತ್ತಿತರರ ಮಂಗಳಕರ ವಸ್ತುಗಳನ್ನು ರಥಕ್ಕೆ ಅರ್ಪಿಸಿ ಹರಕೆ ಸಲ್ಲಿಸಿದರು. ರಥವು ಸಾಗುತ್ತಿದ್ದಂತೆ ಗ್ರಾಮದ ಪ್ರತಿ ಮನೆ ಮನೆಯವರು ದೇವರಿಗೆ ಹಣ್ಣು ಕಾಯಿ ಸಮರ್ಪಿಸಿ ಪೂಜೆ ಸಲ್ಲಿಸಿದರು.
ಗ್ರಾಮಸ್ಥರಿಂದ ಮುದ್ದೆ ಕಾಳುಸಾರು,ಬೆಲ್ಲದ ಪಾಯಾಸ ಪಾಯಸದ ಭೋಜನ ಸವಿದು ದೇವರ ಕೃಪೆಗೆ ಪಾತ್ರರಾದರು.ಅಲ್ಲಲ್ಲಿ ಪಾನಕ, ಮಜ್ಜಿಗೆ, ಕೋಸಂಬರಿ ವಿತರಿಸಲಾಯಿತು.
ಪಟ್ಟಂದೂರು ಅಗ್ರಹಾರ, ಬೆಳತೂರು, ಬೆಳತ್ತೂರು ಕಾಲೋನಿ, ಚನ್ನಸಂದ್ರ, ನಾಗೊಂಡಹಳ್ಳಿ, ಕುಂಬೇನ ಅಗ್ರಹಾರ ಸೇರಿದಂತೆ ಕಾಡುಗುಡಿ ಸುತ್ತಮುತ್ತಲಿನ ಭಕ್ತಾದಿಗಳು ಬ್ರಹ್ಮ
ರಥೋತ್ಸವದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.

ದೇಗುಲದ ಸುತ್ತಲು ತಲೆ ಎತ್ತಿದ್ದ ಪೂಜಾ ಸಾಮಗ್ರಿ, ತಿಂಡಿ ತಿನಿಸು, ಆಟಿಕೆ ವಸ್ತುಗಳ ಮಾರಾಟ, ಗೃಹೋಪಯೋಗಿ ವಸ್ತುಗಳು, ಅಲಂಕಾರಿಕ ವಸ್ತುಗಳು, ಹಣ್ಣು, ತಂಪುಪಾನೀಯ ಸೇರಿದಂತೆ ವಿವಿಧ ಬಗೆಯ ಮಳಿಗೆಗಳಲ್ಲಿ ವ್ಯಾಪಾರ ಜೋರಾಗಿ ಕಂಡುಬಂತು. ಬುರಗು,ಸಿಹಿ ಮತ್ತು ಕುರುಕಲು ತಿಂಡಿ ತಿನಿಸುಗಳ ವ್ಯಾಪಾರ ಜೋರಾಗಿ ಕಂಡುಬಂತು. ಬಿಸಿಲ ಧಗೆಯಿಂದ ಹೊಟ್ಟೆ ತಣ್ಣನೆ ಮಾಡಲು ಭಕ್ತರು ಐಸ್ ಕ್ರೀಂ, ಜ್ಯೂಸ್, ಕಲ್ಲಂಗಡಿ ಹಣ್ಣು ಮತ್ತು ಕಬ್ಬಿನ ಹಾಲಿನ ಮೊರೆ ಹೋಗುತ್ತಿದ್ದರು.
ಈ ಸಂದರ್ಭದಲ್ಲಿ ಅಶ್ವಥ್ ನಾರಾಯಣರೆಡ್ಡಿ, ಬೆಳತೂರು ಯಲ್ಲಪ್ಪ,ರಾಮಾಂಜಿನಯ್ಯ,ಶಾಮ್ ಸುಂದರ್ ಮತ್ತಿತರರು ಇದ್ದರು