ಮಹದೇವಪುರ:- ಹೂಡಿ ಗ್ರಾಮದಲ್ಲಿ ಶ್ರೀ ಲಕ್ಷ್ಮಿ ನಾರಾಯಣ ಸ್ವಾಮಿಯ ಬ್ರಹ್ಮರಥೋತ್ಸವ ಪ್ರಯುಕ್ತ ಶನಿವಾರ ನಡೆದ ಪಲ್ಲಕಿ ಉತ್ಸವ ಹಾಗೂ ಶ್ರೀ ದ್ರೌಪದಮ್ಮ ಹೂವಿನ ಕರಗ ಅದ್ದೂರಿಯಾಗಿ ಜರಗಿತು. ಈ ಸಂದರ್ಭದಲ್ಲಿ 14 ಗ್ರಾಮ ದೇವತೆಗಳ ಪಲ್ಲಕ್ಕಿ ಮೆರವಣಿಗೆ ಗ್ರಾಮದೆಲ್ಲೆಡೆ ಸಂಭ್ರಮ ಮೂಡಿಸಿತು.
ಈ ಸಂದರ್ಭದಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರು ಗ್ರಾಮ ದೇವತೆಗಳ ದರ್ಶನ ಪಡೆದು ನಾಡಿನ ಒಳಿತಿಗಾಗಿ ಪ್ರಾರ್ಥಿಸಿದರು.
ಶ್ರೀ ಮಹಾಗಣಪತಿ, ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ, ಶ್ರೀ ಭೈರವೇಶ್ವರ ಸ್ವಾಮಿ , ಶ್ರೀ ಬಸವೇಶ್ವರ ,ಶ್ರೀ ಸುಬ್ರಹ್ಮಣ್ಯ ಸ್ವಾಮಿ , ಶ್ರೀ ಆಂಜನೇಯ ಸ್ವಾಮಿ, ಶ್ರೀ ವೆಂಕಟರಮಣ ಸ್ವಾಮಿ, ಶ್ರೀ ಅಣ್ಣಮ್ಮ ಮತ್ತು ಮದ್ದೂರಮ್ಮ ದೇವಿ ಸೇರಿದಂತೆ ಇತರೆ ಗ್ರಾಮ ದೇವತೆಗಳ ಪಲ್ಲಕ್ಕಿಗಳು ವಿಶೇಷ ಅಲಂಕಾರಗಳೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿದ್ದವು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕಿಗಳ ಮೆರವಣಿಗೆ ಭಕ್ತಿ ಭಾವದಿಂದ ಸಾಗಿದ್ದು, ನಾದಸ್ವರ, ಗಾರಡಿ ಬೊಂಬೆ ಹಾಗೂ ಡೊಳ್ಳುಗಳ ಸದ್ದಿನ ನಡುವೆ ಭಕ್ತರು ಹಾಡುತ್ತಾ ಉತ್ಸವವನ್ನು ಮತ್ತಷ್ಟು ವೈಭವಮಯಗೊಳಿಸಿದರು.
ಪಲ್ಲಕ್ಕಿ ಸಾಗುವ ದಾರಿಯಲ್ಲಿ ಗ್ರಾಮದ ಪ್ರತಿ ಮನೆಗಳಿಂದ ದೇವರಿಗೆ ಹಣ್ಣು ಕಾಯಿ ನೀಡಿ ಪೂಜೆ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾದರು.
ಪಲ್ಲಕಿ ಉತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ದೇವರುಗಳ ದರ್ಶನ ಪಡೆದು ಆಶೀರ್ವಾದ ಪಡೆದರು. ಗ್ರಾಮದಲ್ಲಿ ಹಬ್ಬದ ವಾತಾವರಣ ನೆಲೆಸಿದ್ದು, ಎಲ್ಲೆಡೆ ಭಕ್ತಿಭಾವದ ಸಂಭ್ರಮ ಕಣ್ಣಿಗೆ ಕಂಡಿತು.
ಈ ಸಂದರ್ಭದಲ್ಲಿ ಶ್ರೀ ಲಕ್ಷ್ಮಿ ನಾರಾಯಣ ಸ್ವಾಮಿ ದೇವಾಲಯ ಸಮಿತಿಯ ಪದಾಧಿಕಾರಿಗಳಾದ ಹೆಚ್ ಎಸ್ ಪಿಳ್ಳಪ್ಪ, ಮಂಜುನಾಥ್, ಅನೂಪ್ ಕುಮಾರ್, ಅಂಜಿನಪ್ಪ, ನರೇಂದ್ರ ಬಾಬು, ವಿಜಯ್ ಗೌಡ, ಮಹೇಶ್ ಗೌಡ, ಪವನ್ ಶೆಟ್ಟಿ, ಪವನ್ ರೆಡ್ಡಿ ಸೇರಿದಂತೆ ಹಲವಾರು ಹಾಜರಿದ್ದರು.