ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ನೇತೃತ್ವದ ಟಿವಿಕೆ (TVK) ಪಕ್ಷ ಭರ್ಜರಿ ಮುನ್ನಡೆ ಸಾಧಿಸುತ್ತಿರುವ ಹಿನ್ನೆಲೆಯಲ್ಲಿ, ದಕ್ಷಿಣ ಭಾರತದ ಖ್ಯಾತ ನಟಿ ತ್ರಿಷಾ ಕೃಷ್ಣನ್ ಅವರು ವಿಜಯ್ ನಿವಾಸಕ್ಕೆ ಭೇಟಿ ನೀಡಿ ಅಭಿನಂದನೆ ಸಲ್ಲಿಸಿದ್ದಾರೆ.
ತಿರುಪತಿಯಿಂದ ನೇರವಾಗಿ ವಿಜಯ್ ಮನೆಗೆ!
ಇಂದು ನಟಿ ತ್ರಿಷಾ ಅವರ ಜನ್ಮದಿನ. ಈ ವಿಶೇಷ ದಿನದಂದು ಬೆಳಿಗ್ಗೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ತ್ರಿಷಾ, ಅಲ್ಲಿಂದ ನೇರವಾಗಿ ಚೆನ್ನೈಗೆ ಆಗಮಿಸಿ ವಿಜಯ್ ಅವರನ್ನು ಭೇಟಿ ಮಾಡಿದ್ದಾರೆ. ಚುನಾವಣೆಯಲ್ಲಿ ಟಿವಿಕೆ ಪಕ್ಷ ತೋರುತ್ತಿರುವ ಅದ್ಭುತ ಪ್ರದರ್ಶನಕ್ಕೆ ವಿಜಯ್ ಅವರಿಗೆ ಹೂಗುಚ್ಛ ನೀಡಿ ಶುಭ ಹಾರೈಸಿದ್ದಾರೆ ಎನ್ನಲಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ‘ಜ ನಾಯಕನ್’ ಟ್ರೆಂಡ್:
ತ್ರಿಷಾ ಅವರು ತಿರುಪತಿಯಿಂದ ಹೊರಬರುವಾಗ ಅಭಿಮಾನಿಯೊಬ್ಬರು “ಮೇಡಂ, ಈ ಬಾರಿ ರಿಸಲ್ಟ್ ನಮ್ಮದೇ!” ಎಂದು ಕೂಗಿದಾಗ, ತ್ರಿಷಾ ಅವರು ಮುಗುಳ್ನಕ್ಕು ಅಲ್ಲಿಂದ ತೆರಳಿದ್ದರು. ಸದ್ಯ ಸೋಶಿಯಲ್ ಮೀಡಿಯಾ ಎಕ್ಸ್ (X) ನಲ್ಲಿ ತ್ರಿಷಾ ಫೋಟೋಗಳ ಜೊತೆಗೆ #JanaNayagan (ಜನ ನಾಯಕ) ಎಂಬ ಹ್ಯಾಶ್ಟ್ಯಾಗ್ ಭಾರೀ ಟ್ರೆಂಡ್ ಆಗುತ್ತಿದೆ.
ಮ್ಯಾಜಿಕ್ ಫಿಗರ್ ಸಮೀಪ ವಿಜಯ್ ಪಕ್ಷ:
ತಮಿಳುನಾಡು ವಿಧಾನಸಭಾ ಚುನಾವಣೆಯ ಎಣಿಕೆ ಪ್ರಕ್ರಿಯೆ ಭರದಿಂದ ಸಾಗಿದ್ದು, ವಿಜಯ್ ಅವರ ಟಿವಿಕೆ ಪಕ್ಷವು ಬಹುಮತಕ್ಕೆ ಬೇಕಾದ ಮ್ಯಾಜಿಕ್ ಫಿಗರ್ನ ತೀರಾ ಹತ್ತಿರದಲ್ಲಿದೆ. ಇದೇ ವೇಳೆ ಕಾಂಗ್ರೆಸ್, ಸಿಪಿಐ ಮತ್ತು ಡಿಎಂಕೆಯಂತಹ ಪಕ್ಷಗಳು ವಿಜಯ್ ಅವರೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿವೆ ಎಂದು ವರದಿಯಾಗಿದೆ. ಎಐಎಡಿಎಂಕೆ (AIADMK) ಜೊತೆ ಅಧಿಕಾರ ಹಂಚಿಕೊಳ್ಳಲು ವಿಜಯ್ ಆಸಕ್ತಿ ತೋರಿಲ್ಲ ಎನ್ನಲಾಗುತ್ತಿದ್ದು, ಮೈತ್ರಿ ಕುರಿತಾದ ಸ್ಪಷ್ಟ ಚಿತ್ರಣ ಇಂದು ಸಂಜೆಯೊಳಗೆ ಸಿಗುವ ಸಾಧ್ಯತೆಯಿದೆ.
ಸದ್ಯಕ್ಕಂತೂ ತಮಿಳುನಾಡು ರಾಜಕೀಯದಲ್ಲಿ ವಿಜಯ್ ಅವರ ‘ವೆಟ್ರಿ’ (ಗೆಲುವು) ಮತ್ತು ತ್ರಿಷಾ ಅವರ ಭೇಟಿ ದೊಡ್ಡ ಮಟ್ಟದ ಸಂಚಲನ ಮೂಡಿಸಿದೆ.