ದೊಡ್ಡಬಳ್ಳಾಪುರ: ನಗರದ ಸ್ಕೌಟ್ ಕ್ಯಾಂಪ್ ರಸ್ತೆಯಲ್ಲಿ ಇಂದು ಬೆಳಗಿನ ಜಾವ ಅಪಘಾತ ಸಂಭವಿಸಿ ಥಾರ್ ಕಾರಿನಲ್ಲಿದ್ದವರಿಗೆ ಗಂಭೀರ ಗಾಯಗಳಾಗಿದ್ದು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇಂದು ಬೆಳಗ್ಗೆ ಸುಮಾರು 5.30 ರ ವೇಳೆ ಕ್ಯಾಂಪ್ ಕಡೆಯಿಂದ ಬಂದ ಕಾರು ಖಾಸಗಿ ಬ್ಯಾಂಕ್ ಸಮೀಪ, ನಾಯಿ ಅಡ್ಡ ಬಂದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಕಾರಿನಲ್ಲಿದ್ದ ಮೂವರು ಯುವತಿಯರು, ಇಬ್ಬರು ಯುವಕರಿಗೆ ತೀವ್ರ ಗಾಯಗಳಾಗಿದೆ. ಕಾರಿನ ಚಾಲಕ ಹಾಗೂ ಮತ್ತೋರ್ವ ಯುವಕನ ಸ್ಥಿತಿ ಚಿಂತಾಜನಕ ಎನ್ನಲಾಗಿದೆ.

ಇನ್ನೂ ಅಪಘಾತಕ್ಕೆ ಒಳಗಾದವರು ಆಂಧ್ರಪ್ರದೇಶದ ಮೂಲದವರು ಎಂದು ತಿಳಿದುಬಂದಿದ್ದು, ಬಾಶೆಟ್ಟಿಹಳ್ಳಿ ಸಮೀಪದ ಪಿಜಿಯಲ್ಲಿ ವಾಸವಿದ್ದರು ಎನ್ನಲಾಗಿದೆ.
ಭಾನುವಾರದ ರಜೆ ಹಿನ್ನೆಲೆ ಸ್ವಂತ ಊರಿಗೆ ತೆರಳಿ ಇಂದು ಹಿಂತಿರುಗಿ ಬರುವ ವೇಳೆ ಈ ದುರ್ಘಟನೆ ಸಂಭವಿಸಿದೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ದುರ್ಘಟನೆ ಸಂಭವಿಸಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.