ಸಮೀಕ್ಷೆ ವೇಳೆ ಹೊಲಯ ಅಥವಾ ಛಲವಾದಿ ಹೆಸರನ್ನಷ್ಟೆ ನಮೂದಿಸಿ: ರಮೇಶ್

ಸ್ಥಳೀಯ ಸುದ್ದಿ

ರಾಘವೇಂದ್ರ ಹೆಚ್.ಎ

5/6/20251 min read

ದೊಡ್ಡಬಳ್ಳಾಪುರ: ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿಯ ಉಪಜಾತಿಗಳ ದತ್ತಾಂಶ ಸಂಗ್ರಹ ಕಾರ್ಯವನ್ನು ಮೇ 5 ರಿಂದ ಆರಂಭಿಸಿದೆ. ಮನೆ ಮನೆ ದತ್ತಾಂಶ ಸಂಗ್ರಹಕ್ಕೆ ಅಧಿಕಾರಿಗಳು ಬಂದಾಗ ತಾಲ್ಲೂಕಿನ ಸಮುದಾಯದ ಜನತೆಗಳು ಯಾವುದೇ ಗೊಂದಲಕ್ಕೆ ಒಳಗಾಗದೇ ಹೊಲಯ ಅಥವಾ ಛಲವಾದಿ ಈ ಎರಡು ಜಾತಿಗಳನ್ನಷ್ಟೆ ನಮೂದಿಸಬೇಕು ಎಂದು ದಲಿತ ಮುಖಂಡರಾದ ಸೊಣ್ಣಪ್ಪನಹಳ್ಳಿ ರಮೇಶ್ ಮನವಿ ಮಾಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ಇಂದು ನಡೆದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು. ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು ಒಳಮೀಸಲಾತಿ ಸಂಬಂಧ ಮಾಡಿರುವ ಶಿಫಾರಸ್ಸಿನ ಆಧಾರದಲ್ಲಿ ಮುಂದಿನ ಜನಸಂಖ್ಯೆಯಾಧಾರವಾಗಿ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸಮಾನ ಮೀಸಲಾತಿ ದೊರೆಯಲಿದೆ ಆದ್ದರಿಂದ ಸಮೀಕ್ಷೆ ವೇಳೆ ಮೂಲ ಜಾತಿ ಕಾಲಂನಲ್ಲಿ ಹೊಲಯ ಅಥವ ಚಲವಾದಿ ಎಂದಷ್ಟೆ ನಮೂದು ಮಾಡುವಂತೆ ತಿಳಿಸಿದರು.

ಬಳಿಕ ಕೊಡಿಗೆಹಳ್ಳಿ ಮಾಜಿ ಗ್ರಾ.ಪಂ. ಅಧ್ಯಕ್ಷ ಮುನಿಯಪ್ಪ ಮಾತನಾಡಿ, ಪರಿಶಿಷ್ಟ ಜಾತಿಯ ಒಟ್ಟು 101 ಜಾತಿಯಲ್ಲಿ ನಾವು ಹೆಚ್ಚಿನ ಸಂಖ್ಯೆಯಲ್ಲಿ ಇದ್ದೇವೆ ಎಂಬ ದ್ವಂದ್ವಗಳಿಂದ ಮುಕ್ತಗೊಳಿಸುವ ಸಲುವಾಗಿ ಸರ್ಕಾರ ಈ ಸಮೀಕ್ಷೆ ನಡೆಸುತ್ತಿದೆ. ಆದ್ದರಿಂದ ಈ ಸಮೀಕ್ಷೆಯಲ್ಲಿ ಎಲ್ಲರೂ ಭಾವಗಿಸಿ ಹೊಲಯ ಮತ್ತು ಚಲವಾದಿ ಹೆಸರುಗಳನ್ನಷ್ಟೆ ನಮೂದಿಸಬೇಕು ಎಂದರು.

ರಾಜ್ಯ ಸರ್ಕಾರ ಏಕ ಸದಸ್ಯ ಪೀಠದಿಂದ ಸಮೀಕ್ಷೆಯಂಥ ಉತ್ತಮ ನಿರ್ಧಾರ ಕೈಗೊಂಡಿದ್ದಾರೆ. ಮಾದಿಗ ಮತ್ತು ಹೊಲೆಯ ಛಲವಾದಿ ಜನಸಂಖ್ಯೆ ಎಷ್ಟಿದೆ ಎಂಬುದು ಈಗ ತಿಳಿಯಬೇಕಾಗಿದೆ. ಸದ್ಯ ಈ ಸಮೀಕ್ಷೆಯಲ್ಲಿ ಎಲ್ಲರೂ ಭಾಗವಹಿಸಿ ನಿಖರವಾದ ಮಾಹಿತಿ ನೀಡಬೇಕು. ಇನ್ನು ಮುಂದೆ ಯಾವ ಸರ್ಕಾರಗಳು ಸಮೀಕ್ಷೆಗೆ ಮುಂದಾಗುತ್ತವೆ ಎಂಬುದು ಗೊತ್ತಿಲ್ಲ. ಮನೆ ಬಾಗಿಲಿಗೆ ಅಧಿಕಾರಿಗಳು ಬಂದಾಗ ಛಲವಾದಿ/ಹೊಲಯ ಎಂದು ಬರೆಸಬೇಕು ಎಂದು ದಲಿತ ಮುಖಂಡ ಮರಿಯಪ್ಪ ತಿಳಿಸಿದರು.

ಪರಿಶಿಷ್ಟ ಜಾತಿಯ ಬಲಗೈ ಸಮುದಾಯದಲ್ಲಿ ಜಾತಿ ಸಮೀಕ್ಷೆಯ ಕುರಿತು ಕೆಲವು ಗೊಂದಲಗಳಿವೆ. ಬಲಗೈ ಸಮುದಾಯದಲ್ಲಿ 37ಕ್ಕೂ ಹೆಚ್ಚು ಉಪ ಜಾತಿಗಳಿವೆ. ಈ ಪೈಕಿ ಸಮೀಕ್ಷೆ ವೇಳೆ ಹೊಲಯ ಅಥವಾ ಛಲವಾದಿ ಎಂದಷ್ಟೆ ನಮೂದಿಸಬೇಕು ಎಂದು ಮುಖಂಡರಾದ ಮುನಿರಾಜ್ ಹೇಳಿದರು.

ಈ ವೇಳೆ ತಾಲೂಕಿನ ದಲಿತ ಮುಖಂಡರು ಇದ್ದರು.