ಶಿಕ್ಷಕರೊಬ್ಬರ ಮೇಲೆ ಯುವಕನಿಂದ ಬಿಯರ್ ಬಾಟಲನಿಂದ ಮಾರಣಾಂತಿಕ‌ ಹಲ್ಲೆ

ಜಿಲ್ಲಾ ಸುದ್ದಿ

Raghavendra H A

5/16/20251 min read

ಬಾಗಲಕೋಟೆ: ಕ್ಷುಲ್ಲಕ ಕಾರಣಕ್ಕೆ ಯುವಕನೋರ್ವ ಶಿಕ್ಷಕರೊಬ್ಬರ ಮೇಲೆ ಒಡೆದ ಬಿಯರ್ ಬಾಟ್ಲಿಯಿಂದ ಮಾರಣಾಂತಿಕ‌ ಹಲ್ಲೆ ನಡೆಸಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ‌ ಸಾವಳಗಿ ಗ್ರಾಮದಲ್ಲಿ ಜರುಗಿದೆ. ಶಿಕ್ಷಕನ ಮೇಲೆ‌ ಹಲ್ಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸಾವಳಗಿ ಗ್ರಾಮದ ಬಿ‌.ಎಲ್.ಡಿ.ಇ ಶಾಲೆಯ ಶಿಕ್ಷಕ ರಾಮು ಪೂಜಾರಿ ಹಾಗೂ ಶಿಕ್ಷಕರ ಪಕ್ಕದ ಮನೆಯ ಯುವಕ ಪವನ್ ಜಾಧವ್ ನಡುವೆ ಕ್ರಿಕೆಟ್ ಬಾಲ್ ವಿಚಾರಕ್ಕೆ ಮಾತಿನ ಚಕಮಕಿ ನಡೆದಿದೆ. ಬಾಲ್‌ ಶಿಕ್ಷಕನ ಮನೆಯ ಒಳಗೆ ಬಿದ್ದಿದ್ದರಿಂದ ಶಿಕ್ಷಕ ಬೈದು ಬುದ್ದಿವಾದ ಹೇಳಿದ್ದರಂತೆ ಇದಕ್ಕೆ ಕೋಪಗೊಂಡ ಯುವಕ ಮಾರಣಾಂತಿಕ ಹಲ್ಲೆ ಮುಂದಾಗಿದ್ದಾನೆ.

ಶಿಕ್ಷಕರ ಬೈಗುಳದಿಂದ ಪವನ್ ಮನಸ್ಸಿನಲ್ಲಿ ದ್ವೇಷ ಬೆಳೆದಿತ್ತು. ಇದೇ ದ್ವೇಷದ ಕಾರಣದಿಂದ ಶಾಲೆಗೆ ಬಂದು ಶಿಕ್ಷಕನ ಮೇಲೆ ಒಡೆದ ಬಿಯರ್ ಬಾಟ್ಲಿಯಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಶಿಕ್ಷಕನಿಗೆ ಬಿಯರ್ ಬಾಟ್ಲಿಯಿಂದ ಇರಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಾರಣಾಂತಿಕ ಹಲ್ಲೆಗೆ ಒಳಗಾಗಿರುವ ಶಿಕ್ಷಕ ರಾಮುರನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶಿಕ್ಷಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ತಿಳಿದು ಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಸಾವಳಗಿ ಠಾಣೆಯ ಪೊಲೀಸರು ಯುವಕನನ್ನ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.