ಬೆಸ್ಕಾಂ ಕುಂದು ಕೊರತೆ ಸಭೆಯಲ್ಲಿ ಸಮಸ್ಯೆಗಳ ಸರಮಾಲೆ, ಇನ್ಮುಂದೆ ಈ ವಾರಗಳಲ್ಲಿ ವಿದ್ಯುತ್ ಸಮಸ್ಯೆ ಉಂಟಾಗದು-ಎಇಇ ವಿನಯ್ ಕುಮಾರ್
ಸ್ಥಳೀಯ ಸುದ್ದಿ


ದೊಡ್ಡಬಳ್ಳಾಪುರ: ಇಂದು ನಡೆದ ವಿದ್ಯುತ್ ಸಂಬಂಧಿತ ಗ್ರಾಹಕರ ಕುಂದು ಕೊರತೆ ಸಭೆಯಲ್ಲಿ ಸಾರ್ವಜನಿಕರಿಂದ ಸಮಸ್ಯೆಗಳ ಸರಮಾಲೆಯೇ ಹರಿದು ಬಂದವು.
ನಗರದ ಎಪಿಎಂಸಿ ಮಾರುಕಟ್ಟೆ ಯಾರ್ಡ್ ಗೇಟ್ ಎದುರಿನ ಬೆಸ್ಕಾಂ ಕಚೇರಿಯಲ್ಲಿ ಇಂದು ನಗರ ಉಪವಿಭಾಗದ ಕಾರ್ಯ ನಿರ್ವಾಹಕ ಎಂಜಿನಿಯರ್ ವಿನಯ್ ಕುಮಾರ್ ಹೆಚ್.ಪಿ ಅವರ ನೇತೃತ್ವದಲ್ಲಿ ಕುಂದು ಕೊರತೆ ಸಭೆ ನಡೆಯಿತು.
ಲೋಡ್ ಶೆಡ್ಡಿಂಗ್ ಸದ್ಯ ಜಾರಿಯಲ್ಲಿಲ್ಲ:
ನಗರದಲ್ಲಿ ಯಾವುದೇ ಮಾಹಿತಿ ನೀಡದೆ ದಿನಕ್ಕೆ ಐದರಿಂದ ಆರು ಬಾರಿ ವಿದ್ಯುತ್ ಸ್ಥಗಿತಗೊಳಿಸುತ್ತೀರಿ ಈ ಲೋಡ್ ಶೆಡ್ಡಿಂಗ್ ಬಗ್ಗೆ ಜನರಿಗೆ ಯಾವುದೇ ಮಾಹಿತಿ ನೀಡುವುದಿಲ್ಲ ಎಂದು ಕನ್ನಡಿಗರ ಬಣದ ಕರವೇ ಮುಖಂಡ ಚಂದ್ರು ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿ ಎಇಇ ವಿನಯ್ ಕುಮಾರ್ ಅವರು, ಸದ್ಯ ರಾಜ್ಯ ಸರ್ಕಾರವು ಯಾವುದೇ ಲೋಡ್ ಶೆಡ್ಡಿಂಗ್ ಜಾರಿ ಮಾಡಿಲ್ಲ, ಈ ಬಗ್ಗೆ ಜನರಲ್ಲಿ ಗೊಂದಲಗಳಿವೆ, ಲೋಡ್ ಶೆಡ್ಡಿಂಗ್ ಜಾರಿಯಾದರೇ ಒಮ್ಮೆಲೆಗೆ ಗಂಟೆಗಳ ಗಟ್ಟಲೇ ವಿದ್ಯುತ್ ಸ್ಥಗಿತಗೊಳ್ಳುತ್ತದೆ. 5 ರಿಂದ 10 ನಿಮಿಷಗಳ ವಿದ್ಯುತ್ ಪೂರೈಕೆ ಸ್ಥಗಿತವು ಲೋಡ್ ಶೆಡ್ಡಿಂಗ್ ವ್ಯಾಪ್ತಿಗೆ ಬರುವುದಿಲ್ಲ, ಹಾಗೇನಾದರೂ ಸರ್ಕಾರ ಲೋಡ್ ಶೆಡ್ಡಿಂಗ್ ಜಾರಿ ಮಾಡಿದರೇ ಆಗ ನಾವು ಮಾದ್ಯಮಗಳ ಮೂಲಕ ಮಾಹಿತಿ ನೀಡಬಹುದು, ಸದ್ಯ ವಿದ್ಯುತ್ ಸಮಸ್ಯೆಯೂ ಸಣ್ಣ ಪುಟ್ಟ ತಾಂತ್ರಿಕ ಸಮಸ್ಯೆಗಳು ಉಂಟಾಗಿ ಸರಿಪಡಿಸುವಾಗ ಈ ಸಮ್ಯೆಗಳು ಉಂಟಾಗುತ್ತವೆ ಈ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಹೊಸ ಮನೆಗಳಿಗೆ ವಿದ್ಯುತ್ ಮೀಟರ್ ಸಂಪರ್ಕ ಸಮಸ್ಯೆ:
ಸಾರ್ವಜನಿಕರು ಕೋಟ್ಯಾಂತರ ರೂಗಳಷ್ಟು ಸಾಲಗಳನ್ನು ಮಾಡಿ ಮನೆ ಕಟ್ಟಿ ಕೊನೆಗೆ ವಿದ್ಯುತ್ ಸಂಪರ್ಕಕ್ಕೆ OC (Occupancy Certification) ಸಿಗದೇ ಲಕ್ಷಾಂತರ ಜನರಿಗೆ ತೊಂದರೆಯಾಗುತ್ತಿದೆ ಈ ಬಗ್ಗೆ ಇಂದಿನ ಕುಂದು ಕೊರತೆ ಸಭೆಯ ಮೂಲಕ ಸರ್ಕಾರದ ಗಮನಕ್ಕೆ ತಾವು ತರಬೇಕು ಎಂದು ಕೆಆರ್ಎಸ್ ಪಕ್ಷದ ಮುಖಂಡ ಶಿವಶಂಕರ್ ಅವರು ಕೋರಿದರು, ಈ ಬಗ್ಗೆ ಪ್ರತಿಕ್ರಿಯಿಸಿದ ಎಇಇ ನವೀನ್ ಕುಮಾರ್ ಅವರು, ಸುಪ್ರೀಂ ಕೋರ್ಟ್ ಆದೇಶವನ್ನು ನಾವು ಯತ್ತಾವತ್ತಾಗಿ ಪಾಲಿಸುತ್ತಿದ್ದೇವೆ. ಇದರ ಬಗ್ಗೆ ನಾವು ಪ್ರತಿಕ್ರಿಯಿಸಲು ಆಗದು.
ಸುಪ್ರೀ ಕೋರ್ಟ್ ಆದೇಶದಲ್ಲಿ ಇಂಥದ್ದೆ ಅಳತೆಯ ಮನೆ ಅಥವ ಕಟ್ಟಡ ಎಂದು ನಮೂದಿಸಿಲ್ಲ ಆದ್ದರಿಂದಲೇ ಮನೆಮಾಲೀಕರಿಗೆ ಈ ಗೊಂದಲು ಉಂಟಾಗಿದೆ. ಬೆಸ್ಕಾಂ ನಿಂದ ವಿದ್ಯುತ್ ಸಂಪರ್ಕ ಕೊಡಲು ಸಮಸ್ಯೆ ಇಲ್ಲ, ಇಲ್ಲಿ ಇರುವುದು Occupancy Certificate ಸಮಸ್ಯೆ, ಸದ್ಯ ಸುಪ್ರಿಂ ಕೋರ್ಟ್ ನೀಡಿರುವ ಆದೇಶವನ್ನಷ್ಟೆ ನಾವು ಪಾಲನೆ ಮಾಡುತ್ತಿದ್ದೇವೆ.
ಈ ಸಮಸ್ಯೆಗಳ ಬಗ್ಗೆ ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿಯೂ ಚರ್ಚೆಯಾಗಿದೆ. ಯಾವ ಮಾನದಂಡಗಳ ಮೂಲಕ ಸಮಸ್ಯೆ ಇತ್ಯರ್ಥಗೊಳಿಸಬಹುದು ಎಂಬ ಅಂಶಗಳ ಬಗ್ಗೆಯೂ ಚರ್ಚೆ ನಡೆಯುತ್ತಿದ್ದು ಆದಷ್ಟು ಬೇಗ ಈ ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರವು ಸಿಗಬಹುದು ಕಾದು ನೋಡಬೇಕು ಎಂದರು.




ಇನ್ಮುಂದೆ ಈ ವಾರಗಳಂದು ವಿದ್ಯುತ್ ಸಮಸ್ಯೆ ಉಂಟಾಗದು:
ತಾಲ್ಲೂಕಿನಾದ್ಯಂತ ಸಾವಿರಾರು ನೇಕಾರ ಕುಟುಂಬಗಳಿದ್ದು ಮಗ್ಗವೇ ಜೀವನಕ್ಕೆ ಆಧಾರವಾಗಿದೆ. ವಾರ ಪೂರ್ತಿ ಸೀರೆ ನೇಯುವ ನೇಕಾರರಿಗೆ ವಿದ್ಯುತ್ ಕಡಿತಗೊಂಡರೆ ಬಾರಿ ಮೊತ್ತದ ನಷ್ಟ ಉಂಟಾಗುತ್ತದೆ. ಮಗ್ಗದ ಮಾಲೀಕರಿಗೆ ವಾರದ ಬಟವಾಡೆ ನೀಡಲು ಕಷ್ಟವಾಗುತ್ತದೆ ಆದ್ದರಿಂದ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ನೇಕಾರರ ಸಂಘದ ಮುಖಂಡರಾದ ಹೇಮಂತ್ ರಾಜ್ ಮನವಿ ಮಾಡಿದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವಿನಯ್ ಕುಮಾರ್ ಅವರು, ಹೌದು, ಈ ಸಮಸ್ಯೆ ಕುರಿತು ನನ್ನ ಗಮನಕ್ಕೂ ಬಂದಿದೆ ಇನ್ನು ಮುಂದೆ ವಾರದಲ್ಲಿ ಗುರುವಾರ, ಶುಕ್ರವಾರ ಮತ್ತು ಶನಿವಾರದಂದು ವಿದ್ಯುತ್ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗುವುದು ಮತ್ತು ಸಮಸ್ಯೆ ಉಂಟಾದರೇ ಎರಡು ಮೂರು ದಿನಗಳ ಮೊದಲೇ ಸಮಸ್ಯೆಗಳ ಬಗ್ಗೆ ಪ್ರಕಟಣೆ ಹೊರಡಿಸಲಾಗುವುದು ಎಂದರು.
ಈ ವೇಳೆ ಅಧಿಕಾರಿಗಳು, ನಗರದ ಮುಖಂಡರು, ಸಾರ್ವಜನಿಕರು ಸೇರಿದಂತೆ ಹಲವರು ಉಪಸ್ಥಿತರಿದ್ದರು.