ಬೆಸ್ಕಾಂ ಕುಂದು ಕೊರತೆ ಸಭೆಯಲ್ಲಿ ಸಮಸ್ಯೆಗಳ ಸರಮಾಲೆ, ಇನ್ಮುಂದೆ ಈ ವಾರಗಳಲ್ಲಿ ವಿದ್ಯುತ್​ ಸಮಸ್ಯೆ ಉಂಟಾಗದು-ಎಇಇ ವಿನಯ್​ ಕುಮಾರ್​

ಸ್ಥಳೀಯ ಸುದ್ದಿ

ರಾಘವೇಂದ್ರ ಹೆಚ್.ಎ

4/19/20251 min read

ದೊಡ್ಡಬಳ್ಳಾಪುರ: ಇಂದು ನಡೆದ ವಿದ್ಯುತ್​ ಸಂಬಂಧಿತ ಗ್ರಾಹಕರ ಕುಂದು ಕೊರತೆ ಸಭೆಯಲ್ಲಿ ಸಾರ್ವಜನಿಕರಿಂದ ಸಮಸ್ಯೆಗಳ ಸರಮಾಲೆಯೇ ಹರಿದು ಬಂದವು.

ನಗರದ ಎಪಿಎಂಸಿ ಮಾರುಕಟ್ಟೆ ಯಾರ್ಡ್​ ಗೇಟ್​ ಎದುರಿನ ಬೆಸ್ಕಾಂ ಕಚೇರಿಯಲ್ಲಿ ಇಂದು ನಗರ ಉಪವಿಭಾಗದ ಕಾರ್ಯ ನಿರ್ವಾಹಕ ಎಂಜಿನಿಯರ್​ ವಿನಯ್​ ಕುಮಾರ್ ಹೆಚ್​.ಪಿ ಅವರ ನೇತೃತ್ವದಲ್ಲಿ ಕುಂದು ಕೊರತೆ ಸಭೆ ನಡೆಯಿತು.

ಲೋಡ್​ ಶೆಡ್ಡಿಂಗ್​ ಸದ್ಯ ಜಾರಿಯಲ್ಲಿಲ್ಲ:

ನಗರದಲ್ಲಿ ಯಾವುದೇ ಮಾಹಿತಿ ನೀಡದೆ ದಿನಕ್ಕೆ ಐದರಿಂದ ಆರು ಬಾರಿ ವಿದ್ಯುತ್​ ಸ್ಥಗಿತಗೊಳಿಸುತ್ತೀರಿ ಈ ಲೋಡ್ ಶೆಡ್ಡಿಂಗ್​ ಬಗ್ಗೆ ಜನರಿಗೆ ಯಾವುದೇ ಮಾಹಿತಿ ನೀಡುವುದಿಲ್ಲ ಎಂದು ಕನ್ನಡಿಗರ ಬಣದ ಕರವೇ ಮುಖಂಡ ಚಂದ್ರು ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿ ಎಇಇ ವಿನಯ್​ ಕುಮಾರ್​ ಅವರು, ಸದ್ಯ ರಾಜ್ಯ ಸರ್ಕಾರವು ಯಾವುದೇ ಲೋಡ್​ ಶೆಡ್ಡಿಂಗ್​ ಜಾರಿ ಮಾಡಿಲ್ಲ, ಈ ಬಗ್ಗೆ ಜನರಲ್ಲಿ ಗೊಂದಲಗಳಿವೆ, ಲೋಡ್​ ಶೆಡ್ಡಿಂಗ್​ ಜಾರಿಯಾದರೇ ಒಮ್ಮೆಲೆಗೆ ಗಂಟೆಗಳ ಗಟ್ಟಲೇ ವಿದ್ಯುತ್​ ಸ್ಥಗಿತಗೊಳ್ಳುತ್ತದೆ. 5 ರಿಂದ 10 ನಿಮಿಷಗಳ ವಿದ್ಯುತ್ ಪೂರೈಕೆ ಸ್ಥಗಿತವು ಲೋಡ್​ ಶೆಡ್ಡಿಂಗ್​ ವ್ಯಾಪ್ತಿಗೆ ಬರುವುದಿಲ್ಲ, ಹಾಗೇನಾದರೂ ಸರ್ಕಾರ ಲೋಡ್​ ಶೆಡ್ಡಿಂಗ್​ ಜಾರಿ ಮಾಡಿದರೇ ಆಗ ನಾವು ಮಾದ್ಯಮಗಳ ಮೂಲಕ ಮಾಹಿತಿ ನೀಡಬಹುದು, ಸದ್ಯ ವಿದ್ಯುತ್​ ಸಮಸ್ಯೆಯೂ ಸಣ್ಣ ಪುಟ್ಟ ತಾಂತ್ರಿಕ ಸಮಸ್ಯೆಗಳು ಉಂಟಾಗಿ ಸರಿಪಡಿಸುವಾಗ ಈ ಸಮ್ಯೆಗಳು ಉಂಟಾಗುತ್ತವೆ ಈ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಹೊಸ ಮನೆಗಳಿಗೆ ವಿದ್ಯುತ್​ ಮೀಟರ್​ ಸಂಪರ್ಕ ಸಮಸ್ಯೆ:

ಸಾರ್ವಜನಿಕರು ಕೋಟ್ಯಾಂತರ ರೂಗಳಷ್ಟು ಸಾಲಗಳನ್ನು ಮಾಡಿ ಮನೆ ಕಟ್ಟಿ ಕೊನೆಗೆ ವಿದ್ಯುತ್​ ಸಂಪರ್ಕಕ್ಕೆ OC (Occupancy Certification) ಸಿಗದೇ ಲಕ್ಷಾಂತರ ಜನರಿಗೆ ತೊಂದರೆಯಾಗುತ್ತಿದೆ ಈ ಬಗ್ಗೆ ಇಂದಿನ ಕುಂದು ಕೊರತೆ ಸಭೆಯ ಮೂಲಕ ಸರ್ಕಾರದ ಗಮನಕ್ಕೆ ತಾವು ತರಬೇಕು ಎಂದು ಕೆಆರ್​ಎಸ್​ ಪಕ್ಷದ ಮುಖಂಡ ಶಿವಶಂಕರ್ ಅವರು ಕೋರಿದರು, ಈ ಬಗ್ಗೆ ಪ್ರತಿಕ್ರಿಯಿಸಿದ ಎಇಇ ನವೀನ್​ ಕುಮಾರ್​ ಅವರು, ಸುಪ್ರೀಂ ಕೋರ್ಟ್​ ಆದೇಶವನ್ನು ನಾವು ಯತ್ತಾವತ್ತಾಗಿ ಪಾಲಿಸುತ್ತಿದ್ದೇವೆ. ಇದರ ಬಗ್ಗೆ ನಾವು ಪ್ರತಿಕ್ರಿಯಿಸಲು ಆಗದು.

ಸುಪ್ರೀ ಕೋರ್ಟ್​ ಆದೇಶದಲ್ಲಿ ಇಂಥದ್ದೆ ಅಳತೆಯ ಮನೆ ಅಥವ ಕಟ್ಟಡ ಎಂದು ನಮೂದಿಸಿಲ್ಲ ಆದ್ದರಿಂದಲೇ ಮನೆಮಾಲೀಕರಿಗೆ ಈ ಗೊಂದಲು ಉಂಟಾಗಿದೆ. ಬೆಸ್ಕಾಂ ನಿಂದ ವಿದ್ಯುತ್​ ಸಂಪರ್ಕ ಕೊಡಲು ಸಮಸ್ಯೆ ಇಲ್ಲ, ಇಲ್ಲಿ ಇರುವುದು Occupancy Certificate ಸಮಸ್ಯೆ, ಸದ್ಯ ಸುಪ್ರಿಂ ಕೋರ್ಟ್​ ನೀಡಿರುವ ಆದೇಶವನ್ನಷ್ಟೆ ನಾವು ಪಾಲನೆ ಮಾಡುತ್ತಿದ್ದೇವೆ.

ಈ ಸಮಸ್ಯೆಗಳ ಬಗ್ಗೆ ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿಯೂ ಚರ್ಚೆಯಾಗಿದೆ. ಯಾವ ಮಾನದಂಡಗಳ ಮೂಲಕ ಸಮಸ್ಯೆ ಇತ್ಯರ್ಥಗೊಳಿಸಬಹುದು ಎಂಬ ಅಂಶಗಳ ಬಗ್ಗೆಯೂ ಚರ್ಚೆ ನಡೆಯುತ್ತಿದ್ದು ಆದಷ್ಟು ಬೇಗ ಈ ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರವು ಸಿಗಬಹುದು ಕಾದು ನೋಡಬೇಕು ಎಂದರು.

ಇನ್ಮುಂದೆ ಈ ವಾರಗಳಂದು ವಿದ್ಯುತ್​ ಸಮಸ್ಯೆ ಉಂಟಾಗದು:

ತಾಲ್ಲೂಕಿನಾದ್ಯಂತ ಸಾವಿರಾರು ನೇಕಾರ ಕುಟುಂಬಗಳಿದ್ದು ಮಗ್ಗವೇ ಜೀವನಕ್ಕೆ ಆಧಾರವಾಗಿದೆ. ವಾರ ಪೂರ್ತಿ ಸೀರೆ ನೇಯುವ ನೇಕಾರರಿಗೆ ವಿದ್ಯುತ್​ ಕಡಿತಗೊಂಡರೆ ಬಾರಿ ಮೊತ್ತದ ನಷ್ಟ ಉಂಟಾಗುತ್ತದೆ. ಮಗ್ಗದ ಮಾಲೀಕರಿಗೆ ವಾರದ ಬಟವಾಡೆ ನೀಡಲು ಕಷ್ಟವಾಗುತ್ತದೆ ಆದ್ದರಿಂದ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ನೇಕಾರರ ಸಂಘದ ಮುಖಂಡರಾದ ಹೇಮಂತ್ ರಾಜ್​ ಮನವಿ ಮಾಡಿದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವಿನಯ್​​ ಕುಮಾರ್​ ಅವರು, ಹೌದು, ಈ ಸಮಸ್ಯೆ ಕುರಿತು ನನ್ನ ಗಮನಕ್ಕೂ ಬಂದಿದೆ ಇನ್ನು ಮುಂದೆ ವಾರದಲ್ಲಿ ಗುರುವಾರ, ಶುಕ್ರವಾರ ಮತ್ತು ಶನಿವಾರದಂದು ವಿದ್ಯುತ್​ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗುವುದು ಮತ್ತು ಸಮಸ್ಯೆ ಉಂಟಾದರೇ ಎರಡು ಮೂರು ದಿನಗಳ ಮೊದಲೇ ಸಮಸ್ಯೆಗಳ ಬಗ್ಗೆ ಪ್ರಕಟಣೆ ಹೊರಡಿಸಲಾಗುವುದು ಎಂದರು.

ಈ ವೇಳೆ ಅಧಿಕಾರಿಗಳು, ನಗರದ ಮುಖಂಡರು, ಸಾರ್ವಜನಿಕರು ಸೇರಿದಂತೆ ಹಲವರು ಉಪಸ್ಥಿತರಿದ್ದರು.