ಬೆಟ್ಟಿಂಗ್: ನೀರು ಬೆರಸದೇ 5 ಬಾಟಲ್ ಮದ್ಯ ಕುಡಿದು ಯುವಕ ಸಾವು
ಸ್ಥಳೀಯ ಸುದ್ದಿ


ಸ್ನೇಹಿತರೆಲ್ಲಾ ಸೇರಿದಾಗ ಅತೀ ಹೆಚ್ಚು ಮದ್ಯ ಸೇವನೆ ಯಾರು ಸೇವನೆ ಮಾಡಲಾಗುತ್ತೆ ಎಂದು ಬಾಜಿ ಕಟ್ಟಿ ಗೆದ್ದಿರುವು ನೋಡಿರುತ್ತೇವೆ.ಕೆಲವರು ಸೋಲಿರುವುದು ಕಂಡಿದ್ದೇವೆ.ಆದರೆ ಆದೇ ರೀತಿ ಕಳೆದ ಒಂದು ವರ್ಷದ ಹಿಂದಷ್ಟೇ ಮದುವೆ ಮಾಡಿಕೊಂಡಿದ್ದ ಯುವಕ ಮದ್ಯಪಾನ ಪಾರ್ಟಿಯಲ್ಲಿ ಬಾಜಿ ಕಟ್ಟಿ 5 ಬಾಟಲಿ ಎಣ್ಣೆಯನ್ನು ನೀರು ಬೆರೆಸದೇ ಕುಡಿದು ಸಾವನ್ನಪ್ಪಿದ್ದಾನೆ.
ಈ ಘಟನೆ ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಪೂಜಾರಹಳ್ಳಿಯಲ್ಲಿ ನಡೆದಿದೆ. ಕಾರ್ತಿಕ್ (21) ಮದ್ಯ ಸೇವಿಸಿ ಸಾವನ್ನಪ್ಪಿದ ಯುವಕ. ಹಣದ ಆಸೆಗಾಗಿ ಬೆಟ್ಟಿಂಗ್ ಕಟ್ಟಿ ನೀರು ಬೆರಸದೆ ಮದ್ಯ ಸೇವನೆ ಮಾಡಿ ಪ್ರಾಣ ಕಳೆದುಕೊಂಡಿದ್ದಾನೆ. ಐದು ಬಾಟಲ್ ಮದ್ಯಕ್ಕೆ ಒಂದು ಹನಿ ನೀರನ್ನೂ ಬೆರೆಸದೇ ಕುಡಿಯುವುದಾಗಿ ಎದುರಾಳಿ ವ್ಯಕ್ತಿಯೊಂದಿಗೆ 10 ಸಾವಿರ ರೂ. ಹಣಕ್ಕೆ ಬಾಜಿ ಕಟ್ಟಿದ್ದಾನೆ. ಇದೇ ಗ್ರಾಮದ ವೆಂಕಟರಡ್ಡಿ, ಸುಬ್ರಮಣಿ ಮತ್ತು ಇತರೆ ಮೂವರೊಂದಿಗೆ ಬೆಟ್ಟಿಂಗ್ ಕಟ್ಟಿದ್ದಾರೆ.
ಈ ವೇಳೆ ನೀನು 5 ಬಾಟಲಿ ಎಣ್ಣೆಯನ್ನು ರಾ ಹೊಡೆದರೆ (ನೀರು ಬೆರೆಸದೆ) ನಾನೊಬ್ಬನೇ 10 ಸಾವಿರ ರೂ. ಕೊಡುವುದಾಗಿ ವೆಂಕಟರೆಡ್ಡಿ ಸವಾಲು ಹಾಕಿದ್ದಾರೆ. ಇನ್ನು ಮದ್ಯ ಸೇವನೆಯಲ್ಲಿ ನಾನು ಎಂದಿಗೂ ಸೋತಿಲ್ಲವೆಂದು ಕಾರ್ತಿಕ್ 5 ಬಾಟಲಿ ಮದ್ಯವನ್ನು ನೀರು ಬೆರೆಸದೇ ಸೇವಿಸಿದ್ದಾನೆ. ನಂತರ, ಮದ್ಯದ ಪ್ರಮಾಣ ಹೆಚ್ಚಾಗಿದ್ದರಿಂದ ತೀವ್ರ ಅಸ್ವಸ್ಥನಾದ ಕಾರ್ತಿಕ್, ನಾನು ಬದುಕುವುದಿಲ್ಲ ಆಸ್ಪತ್ರೆಗೆ ಸೇರಿಸಿ ನನ್ನ ಜೀವ ಉಳಿಸಿ ಎಂದು ಬೇಡಿಕೊಂಡಿದ್ದಾನೆ. ಕೂಡಲೇ, ಆತನ ಸ್ನೇಹಿತರು ಮುಳಬಾಗಿಲು ಆಸ್ಪತ್ರೆಗೆ ದಾಖಲಿಸಿದರು ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾರೆ. ಆದರೆ, ಕಾರ್ತಿಕ್ ದೇಹ ಚಿಕಿತ್ಸೆಗೂ ಸ್ಪಂದಿಸದ ಕಾರಣ, ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾನೆ.
ಕಾರ್ತಿಕ್ ಕಳೆದ ಒಂದು ವರ್ಷದ ಹಿಂದಷ್ಟೇ ಮದುವೆ ಮಾಡಿಕೊಂಡಿದ್ದನು. ಗರ್ಭಿಣಿ ಪತ್ನಿಯನ್ನು ತವರು ಮನೆಗೆ ಕಳುಹಿಸಿದ್ದು, ಎಣ್ಣೆಗೆ ದಾಸನಾಗಿದ್ದನು. ತವರು ಮನೆ ಸೇರಿದ್ದ ಹೆಂಡತಿ ಕಳೆದ 8 ದಿನಗಳ ಹಿಂದಷ್ಟೇ ಮಗುವಿಗೆ ಜನ್ಮ ನೀಡಿದ್ದಾಳೆ. 21 ವರ್ಷ ಪೂರ್ಣಗೊಳ್ಳುವ ಮುನ್ನವೇ ಕಾರ್ತಿಕ್ ಅಪ್ಪನಾಗಿದ್ದಾನೆ. ಆದರೂ, ಜೀವನದ ಜವಾಬ್ದಾರಿಯನ್ನು ಅರಿತುಕೊಳ್ಳದೇ ಮದ್ಯ ಸೇವನೆ ಜೂಜಾಟಕ್ಕೆ ಬಿದ್ದು ಇದೀಗ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಇದೀಗ ತಾಯಿ-ಮಗು ಕುಟುಂಬ ಅಕ್ಷರಶಃ ದಿಕ್ಕು ತೋಚದಂತಾಗಿದ್ದಾರೆ. ಜಗತ್ತಿನ ಅರಿವೇ ಇಲ್ಲದ ಮಗುವಿಗೆ ಅಪ್ಪನಿಲ್ಲದೇ ಬೆಳೆಯುವ ಸ್ಥಿತಿ ಎದುರಾಗಿದೆ. ಬಾಣಂತಿ ಹೆಂಡತಿ ಚಿಕ್ಕ ವಯಸ್ಸಿನಲ್ಲಿಯೇ ತನ್ನ ಗಂಡನನ್ನು ಕಳೆದಕೊಂಡು ಒಬ್ಬಂಟಿಯಾಗಿ ಜೀವನ ಮಾಡುವ ಸ್ಥಿತಿ ಉಂಟಾಗಿದೆ. ಇನ್ನು ತನ್ನ ಜೊತೆಗೆ ಮಗುವನ್ನೂ ಸಾಕುವಂತಹ ಪರಿಸ್ಥಿತಿ ಎದುರಾಗಿದೆ.
ಮದ್ಯಕ್ಕೆ ನೀರು ಬೆರೆಸದೇ ಸೇವನೆ ಮಾಡಿದರೆ ಪ್ರಾಣಕ್ಕೆ ಅಪಾಯ ಆಗುತ್ತದೆ ಎಂಬ ಮುನ್ಸೂಚನೆ ಇದ್ದರೂ ಕಾರ್ತಿಕ್ಗೆ 5 ಬಾಟಲಿ ರಾ ಎಣ್ಣೆ ಹೊಡೆಯಲು ಬಾಜಿ ಕಟ್ಟಿದ ವೆಂಕಟರೆಡ್ಡಿ ಮತ್ತು ಸುಬ್ರಮಣಿ ಸೇರಿದಂತೆ ಆರು ಮಂದಿ ವಿರುದ್ದ ಕಾರ್ತಿಕ್ ಮನೆಯವರು ದೂರು ನೀಡಿದ್ದಾರೆ. ಹತ್ತಿರದ ನಂಗಲಿ ಪೊಲೀಸ್ ಠಾಣೆಯಲ್ಲಿ ಕಾರ್ತಿಕ್ ಮನೆಯವರು ನೀಡಿದ ದೂರನ್ನು ಆಧರಿಸಿ ಪ್ರಕರಣ ದಾಖಲು ಮಾಡಿಕೊಂಡಿದ್ದು, ವೆಂಕಟರೆಡ್ಡಿ ಮತ್ತು ಸುಬ್ರಮಣಿ ಇಬ್ಬರನ್ನೂ ಬಂಧನ ಮಾಡಲಾಗಿದೆ. ಇವರೊಂದಿಗೆ ಬಾಜಿ ಕಟ್ಟಿದ್ದ ಇತರರಿಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.