ಮದುವೆಯಾಗಿ ಮೂರೆ ತಿಂಗಳಲ್ಲಿ ಕೋಟ್ಯಾಧಿಪತಿ ಮಂಗಳಮುಖಿ ಬರ್ಬರ ಹತ್ಯೆ
ಕ್ರೈಮ್


ಮಂಗಳಮುಖಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಕೆ.ಆರ್.ಪುರಂನ ಬಸವನಪುರ ಮುಖ್ಯ ರಸ್ತೆಯ ಮಂಜುನಾಥ ನಗರದಲ್ಲಿ ನಡೆದಿದೆ.
ಕೋಟಿ ಕೋಟಿ ರೂಪಾಯಿ ಹಣವನ್ನು ಸಂಪಾದಿಸಿ ಕೋಟ್ಯಾಧಿಪತಿ ಆಗಿದ್ದ ಹಾಗೂ ಕನ್ನಡಪರ ಸಂಘಟನೆಗಳ ಮೂಲಕ ನಾಡಿನ ಸೇವೆಗೆ ಹೋರಾಡುತ್ತಿದ್ದ ಮಂಗಳಮುಖಿ ತನುಶ್ರೀ, ಮದುವೆ ಮಾಡಿಕೊಂಡು ಮೂರು ತಿಂಗಳಿಗೆ ಕೊಲೆ ಆಗಿದ್ದಾರೆ.
ದುಷ್ಕರ್ಮಿಗಳು ಮಾರಕಾಸ್ತ್ರದಿಂದ ಇರಿದು ಬರ್ಬರ ಹತ್ಯೆ ಮಾಡಿದ್ದಾರೆ. ಮೃತ ಮಂಗಳಮುಖಿ ತನುಶ್ರೀ ಅವರು ಕಳೆದ 3 ತಿಂಗಳ ಹಿಂದೆಯಷ್ಟೇ ಜಗನ್ನಾಥ್ ಎನ್ನುವವರನ್ನು ಮದುವೆ ಮಾಡಿಕೊಂಡಿದ್ದರು. ಇಬ್ಬರ ವಿವಾಹವಾಗಿ ಮೂರು ತಿಂಗಳು ಕಳೆದ ಬಳಿಕ ಇದೀಗ ಆಕೆಯ ಮನೆಯಲ್ಲಿಯೇ ತನುಶ್ರೀ ಕೊಲೆಯಾಗಿದ್ದಾರೆ.
ಇನ್ನು ಮಂಗಳಮುಖಿ ತನುಶ್ರೀ ಅವರು ಕಳೆದ ಮೂರು ದಿನಗಳ ಹಿಂದೆಯೇ ಕೊಲೆ ಆಗಿದ್ದು, ತಡವಾಗಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಕೃತ್ಯದ ಬಳಿಕ ಪತಿ ಜಗನ್ನಾತ್ ಹಾಗೂ ತನುಶ್ರೀ ಅವರ ಮನೆಗೆಲಸದಾಕೆ ಇಬ್ಬರೂ ಪರಾರಿ ಆಗಿದ್ದಾರೆ. ಇನ್ನು ಕರ್ನಾಟಕ ಮಂಗಳಮುಖಿ ತನುಶ್ರೀ ರಕ್ಷಣಾ ವೇದಿಕೆ ಕಾರ್ಯಕರ್ತೆ ಆಗಿದ್ದರು. ಸಂಗಮ ಎನ್ ಜಿಓ ನಡೆಸುತ್ತಿದ್ದರು. ತನುಶ್ರೀ ಕನ್ನಡಪರ ಸಂಘಟನೆಯೊಂದರ ಕಾರ್ಯಕರ್ತೆಯಾಗಿದ್ದರು. ಇನ್ನು ತನುಶ್ರೀ ತಾನು 40 ವರ್ಷಕ್ಕೆ ಬರುವ ವೇಳೆಗೆ ಕೋಟಿ ಕೋಟಿ ಆಸ್ತಿಯನ್ನು ಹೊಂದಿದ್ದರು. ಆಸ್ತಿವಂತೆ ಎಂಬುದನ್ನು ನೋಡಿದ್ದ ಜಗನ್ನಾಥ್ ಮದುವೆ ಮಾಡಿಕೊಂಡು 3 ತಿಂಗಳು ಜೊತೆಯಲ್ಲಿದ್ದನು. ಇದೀಗ ಹೆಂಡತಿ ಕೊಲೆ ಬೆನ್ನಲ್ಲಿಯೇ ಪರಾರಿ ಆಗಿದ್ದಾನೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕೆ.ಆರ್.ಪುರಂ ಠಾಣೆಯ ಪೋಲಿಸರು ಪರಿಶೀಲನೆ ಮಾಡಿದ್ದಾರೆ. ಕೃತ್ಯದ ಸ್ಥಳದಲ್ಲಿ ಸಾಕ್ಷಿಗಳಿಗಾಗಿ ಪತ್ತೆ ಮಾಡಿದ್ದು, ನೂರಾರು ಮಂಗಳಮುಖಿಯರು ಜಮಾವಣೆಗೊಂಡಿದ್ದರು. ಮಂಗಳಮುಖಿಯರಿಗೆ ನಾಯಕಿಯಂತಿದ್ದ ತನುಶ್ರೀಯನ್ನು ಕಳೆದುಕೊಂಡು ದುಃಖಿತರಾಗಿದ್ದಾರೆ. ಪೊಲೀಸರು ಪರಾರಿ ಆಗಿರುವ ಪತಿ ಜಗನ್ನಾಥ್ ಹಾಗೂ ತನುಶ್ರೀ ಮನೆಯ ಕೆಲಸದಾಕೆಯನ್ನು ಪತ್ತೆ ಮಾಡುವುದಕ್ಕೆ ಕಾರ್ಚಾರಣೆ ಆರಂಭಿಸಿದ್ದಾರೆ.