ಇಂಡಿಯಾ ವಿಮಾನ AI-171 ವಿಮಾನ ಪತನ.ಒಟ್ಟು 242 ಜನರ ಸಾವು.ಮಾಜಿ ಸಿಎಂ ಗೆ ಸಂತಾಪ ಸೂಚನೆ.

ದೇಶ/ವಿದೇಶ

ಧರ್ಮ ಬಸವನಪುರ.

6/13/20251 min read

ಅಹಮದಾಬಾದ್‌: ಗುಜರಾತ್‌ನ ಅಹಮದಾಬಾದ್‌ ಸರದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ನ ಗ್ಯಾಟ್ವಿಕ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ AI-171 ಜೂನ್ 12, 2025 ರಂದು ಮಧ್ಯಾಹ್ನ 1:17 ಕ್ಕೆ ಟೇಕ್ ಆಫ್ ಆದ ಕೇವಲ ಐದು ನಿಮಿಷಗಳಲ್ಲಿ ಮೇಘನಿ ನಗರ ಪ್ರದೇಶದಲ್ಲಿ ಪತನಗೊಂಡಿದೆ.

ವಿಮಾನದಲ್ಲಿ 230 ಪ್ರಯಾಣಿಕರು ಮತ್ತು 12 ಸಿಬ್ಬಂದಿ ಸೇರಿದಂತೆ ಒಟ್ಟು 242 ಜನರೂ ಸಾವನ್ನಪ್ಪಿದ್ದಾರೆ ಎಂದು ಏರ್ ಇಂಡಿಯಾ ಅಧಿಕೃತವಾಗಿ ದೃಢೀಕರಿಸಿದೆ. ಈ ದುರಂತದಲ್ಲಿ ಉದಯಪುರದ ನಾಲ್ವರು ಸ್ಥಳೀಯರು, ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿದಂತೆ ಎಲ್ಲರ ಜೀವನ ದುರಂತವಾಗಿ ಅಂತ್ಯಗೊಂಡಿದೆ.

ಏರ್ ಇಂಡಿಯಾನ ಅಧಿಕೃತ ಮಾಹಿತಿಯ ಪ್ರಕಾರ, ವಿಮಾನದಲ್ಲಿ 169 ಭಾರತೀಯರು, 53 ಇಂಗ್ಲೆಂಡ್‌ನವರು, 7 ಪೋರ್ಚುಗಲ್‌ನವರು, ಮತ್ತು 1 ಕೆನಡಾದ ಪ್ರಜೆ ಇದ್ದರು. ಈ ದುರಂತವು ಅಂತರರಾಷ್ಟ್ರೀಯ ಮಟ್ಟದಲ್ಲಿ ಆಘಾತವನ್ನುಂಟುಮಾಡಿದೆ.

ಅಪಘಾತದ ತಕ್ಷಣ 12 ಅಗ್ನಿಶಾಮಕ ದಳಗಳು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ನ 90 ಸಿಬ್ಬಂದಿ, ಮತ್ತು ಗುಜರಾತ್ ಪೊಲೀಸ್ ತಂಡಗಳು ರಕ್ಷಣಾ ಕಾರ್ಯ ಆರಂಭಿಸಿದವು. ಆದರೆ, ಎಲ್ಲರ ಸಾವಿನ ದೃಢೀಕರಣದಿಂದ ಕಾರ್ಯಾಚರಣೆ ದುಃಖದ ವಾತಾವರಣದಲ್ಲಿ ನಡೆಯಿತು. ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ತನಿಖೆ ಆರಂಭಿಸಿದ್ದು, ವಿಮಾನದ ಬ್ಲಾಕ್ ಬಾಕ್ಸ್ ವಿಶ್ಲೇಷಣೆಯಿಂದ ತಾಂತ್ರಿಕ ದೋಷದ ಕಾರಣ ತಿಳಿಯಲಿದೆ.

ಸಂತಾಪ ಸೂಚನೆ:

ಏರ್ ಇಂಡಿಯಾ ಪತನವಾದಾಗ ಆ ವಿಮಾನದಲ್ಲಿ ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ಪ್ರಯಾಣಿಸುತ್ತಿದ್ದರು ಎನ್ನಲಾಗಿತ್ತು ಇದೀಗ ಈ ದುರಂತದಲ್ಲಿ ಅವರು ಮೃತಪಟ್ಟಿರುವುದು ದೃಢವಾಗಿದೆ. ರೂಪಾನಿ ಅವರ ಈ ದುರಂತ ಸಾವಿಗೆ ಹಲವು ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ.