ಒಳ ಮೀಸಲಾತಿ: ಮನೆ ಮನೆ ಸಮೀಕ್ಷೆ ವೇಳೆ ಮೂಲ ಜಾತಿ ಮಾದಿಗ ಹೆಸರು ನಮೂದಿಸಲು ಕರೆ

ಸ್ಥಳೀಯ ಸುದ್ದಿ

ರಾಘವೇಂದ್ರ ಹೆಚ್.ಎ

4/29/20251 min read

ದೊಡ್ಡಬಳ್ಳಾಪುರ: ಪರಿಶಿಷ್ಟ ಜಾತಿಗಳ ಉಪಜಾತಿಗಳ ದತ್ತಾಂಶ ಸಂಗ್ರಹ ಕಾರ್ಯವು ಮೇ.5 ರಿಂದ ಮೇ.17ರ ವರೆಗೆ ಮೊದಲನೇ ‘ಮನೆ ಮನೆ ಸಮೀಕ್ಷೆ’ಗಳು ನಡೆಯಲಿದೆ. ಈ ಸಮೀಕ್ಷೆಯಲ್ಲಿ ಪರಿಶಿಷ್ಟ ಜಾತಿಯ ಆದಿ ಜಾಂಬವ ಜನಾಂಗವದರು ತಮ್ಮ ಮೂಲ ಜಾತಿಯ ಹೆಸರಾದ ಮಾದಿಗ ಹೆಸರನ್ನು ಸ್ಪಷ್ಟವಾಗಿ ನಮೂದಿಸುವಂತೆ ಕರ್ನಾಟಕ ಮಾದಾರ ಮಹಾಸಭಾದ ಮುಖಂಡರಾದ ರಾಮಕೃಷ್ಣಪ್ಪ.ಸಿ ಮನವಿ ಮಾಡಿಕೊಂಡರು.

ನಗರದಲ್ಲಿ ಸೋಮವಾರ ತಾಲ್ಲೂಕು ಘಟಕದ ವತಿಯಿಂದ ನಡೆದ ಭೂತ್​ ಮಟ್ಟದ ಜಾಗೃತಿ ಸಭೆ ಬಳಿಕ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ತಾಲ್ಲೂಕಿನ ಆದಿ ಜಾಂಬವ, ಆದಿ ಕರ್ನಾಟಕ ಸಮುದಾಯಕ್ಕೆ ಸೇರಿದ ಎಲ್ಲರೂ ಸಮೀಕ್ಷೆ ವೇಳೆ ಯಾವುದೇ ಮುಜುಗರಕ್ಕೆ ಒಳಗಾಗದೇ, ಹಿಂಜರಿದೇ, ನಾಚಿಕೆ ಪಟ್ಟುಕೊಳ್ಳದೇ ಮೂಲ ಜಾತಿ ಮಾದಿಗ ಎಂದು ನಮೂದಿಸಬೇಕು. ಆಗ ಸರ್ಕಾರಕ್ಕೆ ನಿಖರವಾದ ಮಾಹಿತಿ ಲಭ್ಯವಾಗುತ್ತದೆ. ಹಾಗೆ ಮಾಡಿದಾಗ ಮಾತ್ರ ಮೂವತ್ತು ವರ್ಷಗಳ ಮಾದಿಗ ಜನಾಂಗದ ಹೋರಾಟಕ್ಕೆ ಜಯ ಸಿಕ್ಕಂತಾಗುತ್ತದೆ.

ಸಮೀಕ್ಷೆ ವೇಳೆ ಮೂಲ ಜಾತಿ ಮಾದಿಗ ಎಂದು ನಮೂದಿಸಿದ್ದೇ ಆದರೇ ನಮ್ಮ ಸಮುದಾಯಕ್ಕೆ ರಾಜಕೀಯ, ಶೈಕ್ಷಣಿಕ, ಉದ್ಯೋಗ ಹೀಗೆ ಎಲ್ಲದರಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಮೀಸಲು ಸಿಗುತ್ತದೆ. ಇಲ್ಲವಾದಲ್ಲಿ ವಂಚನೆಗೊಳಗಾಗುತ್ತೇವೆ ಎಂದರು.

ಮೂರು ಹಂತದಲ್ಲಿ ಸಮೀಕ್ಷೆ:

ರಾಜ್ಯಾದ್ಯಂತ ಪರಿಶಿಷ್ಟ ಜಾತಿಗಳ ಉಪಜಾತಿಗಳು ದತ್ತಾಂಶ ಸಂಗ್ರಹ ಕಾರ್ಯಕ್ಕೆ ಮುಂದಾಗಿರುವ ರಾಜ್ಯ ಸರ್ಕಾರವು, 59 ಸಾವಿರ ಶಿಕ್ಷಕರು ಸಮೀಕ್ಷೆಗೆ ನೇಮಿಸಿದೆ. ಮೊದಲನೇ ಹಂತದ ಸಮೀಕ್ಷೆ- ಮೇ5 ರಿಂದ 17ರ ವರೆಗೆ, ಎರಡನೇ ಹಂತದಲ್ಲಿ ಮೇ.19 ರಿಂದ 21ರ ವರೆಗೆ ಮತಗಟ್ಟೆ ಪ್ರತಿಯೊಂದು ಭೂತ್​ ಗಳಲ್ಲಿ ಶಿಬಿರಗಳನ್ನು ಆಯೋಜನೆ ಮಾಡಲಾಗುತ್ತದೆ. ಮೇ.23 ರಂದು ಆನ್ ಲೈನ್ ಮುಖಾಂತರ ಸ್ವಯಂ ಘೋಷಣೆ ಮಾಡಿಕೊಳ್ಳಲು ಸಮುದಾಯದವರಿಗೆ ಅವಕಾಶವನ್ನು ಕಲ್ಪಿಸಲಾಗಿದೆ ಎಂದರು.

ಬಳಿಕ ಪಾಲನಹಳ್ಳಿ ಮಠದ ಡಾ.ಸಿದ್ದರಾಜು ಸ್ವಾಮಿ ಮಾತನಾಡಿ, ಪರಿಶಿಷ್ಟ ಜಾತಿಗಳ 101 ಉಪಜಾತಿಗಳಲ್ಲೇ ಬಹುಸಂಖ್ಯಾತವಾದ ಮಾದಿಗ ಸಮುದಾಯಕ್ಕೆ ರಾಜಕೀಯ, ಶೈಕ್ಷಣಿಕ, ಉದ್ಯೋಗ, ಸಾಮಾಜಿಕವಾಗಿ ವಂಚನೆಯಾಗುತ್ತಿದೆ. ಇದರ ವಿರುದ್ದವಾಗಿ ಸಮೂದಾಯವದರು ಹಲವು ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಹೀಗಾಗಿ ಪರಿಶಿಷ್ಟ ಜಾತಿಗಳ ಉಪಜಾತಿಗ ದತ್ತಾಂಶ ಸಂಗ್ರಹದ ಸಮೀಕ್ಷೆ ವೇಳೆ ಮೂಲ ಜಾತಿ ಕಾಲಂ ನಲ್ಲಿ ಮಾದಿಗ ಎಂದು ನಮೂದಿಸಬೇಕು ಎಂದು ಕರೆ ನೀಡಿದರು.

ಈ ವೇಳೆ ಬಚ್ಚಹಳ್ಳಿ ನಾಗರಾಜ್, ಟಿ.ಡಿ ‌ಮುನಿಯಪ್ಪ, ಮುನಿ ಸುಬ್ಬಯ್ಯ, ಅಪ್ಪಕಾರನಹಳ್ಳಿ ಹನುಮಯ್ಯ, ಎಎಪಿ ಮುಖಂಡ ಪುರುಷೋತ್ತಮ್, ವಿ.ವೆಂಕಟೇಶ್, ತಳವಾರ್ ನಾಗರಾಜ್, ಹಾದ್ರಿಪುರ ಹರ್ಷ, ವಕೀಲ ಕಾಂತರಾಜ್, ಮುನಿರಾಜ್, ತಮಟೆ ಗಣೇಶ್, ವೆಂಕಟರಮಣಪ್ಪ, ಮುನಿರಾಜ್ ರಾಮದೇವನಹಳ್ಳಿ, ಆರ್.ವಿ ಮಹೇಶ್, ನೇರಳೇಘಟ್ಟ ರಾಮು, ಹನುಮಂತಯ್ಯ, ನಗರಸಭಾ ಸದಸ್ಯ ಶಿವಣ್ಣ, ಹುಲಿಕುಂಟೆ ನರಸಿಂಹಪತಿ, ಕೆಂಪವೆಂಕಟಯ್ಯ, ಮಂಜು ರಾಮದಾಸ್, ಕುರುಬರಹಳ್ಳಿ ಮಂಜು, ನರಸಿಂಹ ಮೂರ್ತಿ, ಕರೀಂ ಸೊನ್ನೇನಹಳ್ಳಿ ಮುನಿಯಪ್ಪ, ಗೊಲ್ಲಹಳ್ಳಿ ಮುನಿಯಪ್ಪ ಸೇರಿದಂತೆ ಹಲವು ಪ್ರಮುಖರು ಇದ್ದರು.