ಕೊಪ್ಪಳ: RCB ಚೊಚ್ಚಲ ಕಪ್ ಗೆದ್ದಿದ್ದಕ್ಕೆ 2 ಕ್ವಿಂಟಲ್ ಚಿಕನ್ ಮಾಡಿಸಿ ಇಡೀ ಊರಿಗೆ ಬಾಡೂಟ!
ರಾಜ್ಯ


ಕೊಪ್ಪಳ: ಬರೋಬ್ಬರಿ 17 ವರ್ಷಗಳ ಕಾಯುವಿಕೆ ಅಂತ್ಯವಾಗಿ ಕೊನೆಗೂ ಕೋಟ್ಯಾಂತರ ಅಭಿಮಾನಿಗಳ ಕಾಯುವಿಕೆಗೆ ಅಂತ್ಯ ಸಿಕ್ಕಿದೆ. ಹೌದು, ಆರ್ಸಿಬಿ ಇಷ್ಟು ವರ್ಷಗಳ ಕಾಲ ಈ ಸಲ ಕಪ್ ನಮ್ದೇ ಎಂದು ಹೇಳುತ್ತಾ ಬಂದಿತ್ತು. ಆದರೆ ಈ ವರ್ಷ ರಜತ್ ಪಾಟಿದಾರ್ ನಾಯಕತ್ವದಲ್ಲಿ ಆರ್ಸಿಬಿ ಈ ಸಲ ಕಪ್ ನಮ್ದು ಎನ್ನುವ ಮೂಲಕ ಐಪಿಎಲ್ ಟ್ರೋಫಿಗೆ ಚೊಚ್ಚಲ ಬಾರಿಗೆ ಮುತ್ತಿಕ್ಕಿದೆ.
ಆರ್ಸಿಬಿ ಕಪ್ ಗೆದ್ದ ದಿನವೇ ಬಾಡೂಟ ಹಾಕಿಸಬೇಕು ಎಂದುಕೊಂಡಿದ್ದರು. ಆದರೆ ಅಂದು ತಡರಾತ್ರಿಯಾಗಿದ್ದರಿಂದ ಆಗಲಿಲ್ಲ. ಮರುದಿನ ಮಾಡಿಸಲು ನಿರ್ಧರಿಸಿದ್ದರು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತದಿಂದ 11 ಜನರು ಮೃತಪಟ್ಟಿದ್ದರಿಂದ ಕೈಬಿಡಲಾಗಿತ್ತು. ಇದೀಗ ಗುರುವಾರ ಬಾಡೂಟ ಹಾಕುವ ಜತೆಗೆ ದುರಂತದಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡವರು ಶೀಘ್ರ ಗುಣಮುಖರಾಗಲೆಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.
ಇದಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಏನಾದರೂ ಈ ಬಾರಿ ಐಪಿಎಲ್ ಟ್ರೋಫಿ ಗೆದ್ದರೆ ಊರಿಗೆ ಬಾಡೂಟ ಹಾಕಿಸೋಣ ಎಂದು ಮಾತನಾಡಿಕೊಂಡಿದ್ದರಂತೆ. ಅದರಂತೆ 17 ವರ್ಷಗಳ ಬಳಿಕ ಆರ್ಸಿಬಿ ಸಹ ಕಪ್ ಗೆದ್ದಿತು. ಅದರಂತೆ ಆರ್ಸಿಬಿ ಫೈನಲ್ನಲ್ಲಿ ಗೆಲುವು ಸಾಧಿಸಿದ್ದರಿಂದ ಯುವಕರ ಗುಂಪು ಸೇರಿ ಬರೋಬ್ಬರಿ 2 ಕ್ವಿಂಟಲ್ ಚಿಕನ್ ಮತ್ತು 2 ಕ್ವಿಂಟಲ್ ಪಲಾವ್ ಮಾಡಿ ಇಡೀ ಗ್ರಾಮದ ಜನರಿಗೆ ಭರ್ಜರಿ ಬಾಡೂಟ ಹಾಕಿಸಿದ್ದಾರೆ. ಆರ್ಸಿಬಿ ಗೆದ್ದರೆ ಗ್ರಾಮಕ್ಕೆ ಬಾಡೂಟ ಹಾಕಿಸಬೇಕು ಎಂಬ ಆಲೋಚನೆ ಇದೀಗ ನನಸಾಗಿದೆ. ಆದರೆ, ಕಪ್ ಗೆದ್ದ ಮರುದಿನವೇ ನಡೆದ ಭೀಕರ ಕಾಳ್ತುಳಿತದ ದುರಂತ ನಡೆದಿದ್ದರಿಂದ ಒಂದು ದಿನ ತಡವಾಗಿ ಊರಿಗೆ ಬಾಡೂಟ ಹಾಕಿಸಿದ್ದೇವೆ ಎಂದು ಯುವಕ ರಾಜು ಯಾದವ್ ತಿಳಿಸಿದ್ದಾರೆ.