ತಿಪಟೂರಿನಲ್ಲಿ ಮನೆಯೊಳಗೆ ನುಗ್ಗಿದ KSRTC ಬಸ್: ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯ.
ಜಿಲ್ಲಾ ಸುದ್ದಿ


ತಿಪಟೂರು : ತಾಲೂಕಿನ ಕಸಬಾ ಹೋಬಳಿ ಕೋನೆಹಳ್ಳಿ ಸಿದ್ದಾಪುರ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕೆಎಸ್ಸಾರ್ಟಿಸಿ ಬಸ್ವೊಂದು ರಸ್ತೆ ಪಕ್ಕದ ಮನೆಗೆ ನುಗ್ಗಿದ ಘಟನೆ ನಡೆದಿದೆ.
ಅಪಘಾತದಲ್ಲಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ 10ಕ್ಕೂ ಹೆಚ್ಚು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಘಟನೆ ಇಂದು ಮುಂಜಾನೆ ಸಿದ್ದಾಪುರ ಗ್ರಾಮದ ರಾಷ್ಟ್ರೀಯ ಹೆದ್ದಾರಿ 206ರ ಸಮೀಪದಲ್ಲಿ ಸಂಭವಿಸಿದೆ.
ಶಿವಮೊಗ್ಗದಿಂದ ಬೆಂಗಳೂರಿಗೆ ಹೊರಟ್ಟಿದ್ದ ಕೆಎಸ್ಸಾರ್ಟಿಸಿ ಬಸ್ ತಿಪಟೂರು ತಾಲೂಕಿನ ಕೊನೇಹಳ್ಳಿ ಸಿದ್ದಾಪುರ ಗ್ರಾಮದ ಬಳಿ ಟೈಯರ್ ಸ್ಪೋಟಗೊಂಡು, ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ಮನೆಗೆ ನುಗ್ಗಿದೆ. ಬಸ್ ನಿಯಂತ್ರಣ ತಪ್ಪಿ ವೇಗವಾಗಿ ರಸ್ತೆ ಬದಿಯ ವಿದ್ಯುತ್ ಕಂಬ, ತೆಂಗಿನ ಮರಕ್ಕೆ ಢಿಕ್ಕಿ ಹೊಡೆದು ರಸ್ತೆ ಬದಿಯ ಪುಟ್ಟಣ್ಣ ಎಂಬುವವರ ಮನೆಗೆ ನುಗ್ಗಿದೆ ಎನ್ನಲಾಗಿದೆ.
ಅಪಘಾತದಲ್ಲಿ ಮಹಿಳೆಯರು ಮಕ್ಕಳು ಸೇರಿ 35ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ತಿಪಟೂರು ಸಾರ್ವಜನಿಕ ಆಸ್ಪತ್ರೆ ಹಾಗೂ ಅರಸೀಕೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೊನ್ನವಳ್ಳಿ ಸಬ್ ಇನ್ಸ್ಪೆಕ್ಟರ್ ರಾಜೇಶ್, ಗ್ರಾಮಾಂತರ ವೃತ್ತ ನಿರೀಕ್ಷಕರಾದ ಚಂದ್ರಶೇಖರ್, ಡಿವೈಎಸ್ಪಿ ವಿನಾಯಕ ಶೆಟಿಗೇರಿ ಸೇರಿದಂತೆ ಕೆಎಸ್ಸಾರ್ಟಿಸಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶಿಲನೆ ನಡೆಸಿದ್ದಾರೆ.