ಮಹದೇವಪುರ: ಯುವ ಮೋರ್ಚ ಸಮಾವೇಶ
ಸ್ಥಳೀಯ ಸುದ್ದಿ


ಮಹದೇವಪುರ: ಕಾರ್ಯಕರ್ತರು, ಸ್ವಾಮಿ ವಿವೇಕಾನಂದರ ಮಾರ್ಗವನ್ನು ಹಿಡಿದು, ಶಿಸ್ತು, ಸೇವಾಭಾವ, ದೇಶಭಕ್ತಿಯಿಂದ ಜನರ ಮಧ್ಯೆ ದುಡಿಯಬೇಕು ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.
ಕ್ಷೇತ್ರದ ಮಾರತ್ತಹಳ್ಳಿಯ ಎಸ್.ಬಿ.ಆರ್ ಪ್ಯಾಲೇಸ್ನಲ್ಲಿ ನಗರ ಮಂಡಲ ಯುವ ಮೋರ್ಚಾ ಅಧ್ಯಕ್ಷ ನವೀನ್ ಚೌದರಿ ಅಧ್ಯಕ್ಷತೆಯಲ್ಲಿ ನಡೆದ ಯುವ ಮೋರ್ಚ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.
ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಶ್ವದ ಮುಂದೆ ಭಾರತವನ್ನು ತಲೆ ಎತ್ತುವಂತೆ ಮಾಡಿದ್ದಾರೆ. ಕೌಶಲ್ಯ ಭಾರತ, ಸ್ಟಾರ್ಟ್ಅಪ್ ಇಂಡಿಯಾ, ಡಿಜಿಟಲ್ ಇಂಡಿಯಾ, ಮುದ್ರಾ ಯೋಜನೆ—ಇವುಗಳೆಲ್ಲ ಯುವಕರಿಗೆ ಬಲ ತುಂಬುವ ಮಹತ್ವದ ಯೋಜನೆಗಳು. ಲಕ್ಷಾಂತರ ಯುವಕರಿಗೆ ತಮ್ಮ ಕನಸು ಸಾಕಾರಗೊಳ್ಳಲು ದಾರಿ ತೋರಿಸಿದವರು ಎಂದು ಹೇಳಿದರು.
ವಿವೇಕಾನಂದರ ಆದರ್ಶ ಹಿಡಿದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೃಷ್ಟಿಯನ್ನು ನಮ್ಮ ಜೀವನದ ಧ್ಯೇಯವನ್ನಾಗಿ ಮಾಡಿಕೊಂಡು, ನೂತನ ಭಾರತ ಕಟ್ಟುವ ಕಾರ್ಯಕ್ಕೆ ಕೈ ಜೋಡಿಸೋಣ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ನಗರ ಮಂಡಲದ ಅಧ್ಯಕ್ಷ ಶ್ರೀಧರ್ ರೆಡ್ಡಿ, ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ತೇಜಸ್, ರಘು, ನಾಗಭೂಷಣ್, ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.