ಅಪರಾಧ ಮುಕ್ತ ಕೆ.ಆರ್.ಪುರಕ್ಕಾಗಿ ಮ್ಯಾರಥಾನ್ ಓಟ.
ಸ್ಥಳೀಯ ಸುದ್ದಿ


ಕೆ.ಆರ್. ಪುರ : ಯುವಕರು ಅಪರಾಧಗಳಲ್ಲಿ ಭಾಗಿಯಾಗದೆ ಅಭಿವೃದ್ಧಿ ಕಾರ್ಯಕ್ರಮಗಳ ಕಡೆಗೆ ಗಮನ ನೀಡಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ಅವರು ಸಲಹೆ ನೀಡಿದ್ದಾರೆ.
ಅಪರಾಧಮುಕ್ತ ಕೆ.ಆರ್. ಪುರ ಕ್ಕಾಗಿ ಕೇಂಬ್ರಿಜ್ ಸಮೂಹ ಸಂಸ್ಥೆ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಕೆ. ಮೋಹನ್ ಬಾಬು ಹಮ್ಮಿಕೊಂಡಿದ್ದ 5 ಮತ್ತು 8 ಕಿ.ಮೀ. ಮ್ಯಾರಥಾನ್ ಉದ್ಘಾಟಿಸಿ ಮಾತನಾಡಿದರು.
ದೈಹಿಕವಾಗಿ ಸದೃಢರಾದ ಯುವಜನತೆ ಅಭಿವೃದ್ಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಇತರರಿಗೆ ಮಾದರಿಯಾಗಬೇಕು ಎಂದು ಕರೆ ನೀಡಿದರು.
ಸಮಾಜದಲ್ಲಿ ಜನರು ಶಾಂತಿ ಸೌಹಾರ್ದತೆಯಿಂದ ಬಾಳಲು, ನೆಮ್ಮದಿಯ ನಾಳೆಗಾಗಿ ಅಪರಾಧ ಮುಕ್ತ ಕೆ.ಆರ್.ಪುರವನ್ನು ಮಾಡಲು ಪ್ರತಿಯೊಬ್ಬರೂ ಪಣತೊಡಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ಡಿ.ಕೆ. ಮೋಹನ್ ಬಾಬು ಅವರು ಮಾತನಾಡಿ ಕೆ.ಆರ್. ಪುರದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಆ ಕುರಿತು ಜಾಗೃತಿ ಮೂಡಿಸಲು ಮ್ಯಾರಥಾನ್ ಹಮ್ಮಿಕೊಳ್ಳಲಾಗಿದೆ. ಮ್ಯಾರಥಾನ್ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಭಾಗವಹಿಸಿರುವುದು ನಮ್ಮ ಆಶಯಕ್ಕೆ ಬಲ ತಂದಿದೆ ಎಂದರು. ಸಮಾಜದಲ್ಲಿ ಮುಂಚೂಣಿ ಸ್ಥಾನದಲ್ಲಿ ಇರುವವರೇ ಅಪರಾಧ ಮಾಡುತ್ತಿದ್ದಾರೆ ಎಂದರು.
ಕೆ.ಆರ್. ಪುರದ ಐಟಿಐ ಮೈದಾನದಿಂದ ಐದು ಕಿ.ಮೀ. ಮತ್ತು ಎಂಟು ಕಿ.ಮೀ. ಮ್ಯಾರಥಾನ್ ನಡೆಯಿತು. ಓಟದಲ್ಲಿ ಪಾಲ್ಗೊಂಡವರಿಗೆ ಪ್ರಮಾಣಪತ್ರ ವಿತರಿಸಿದರು
ರಾಜ್ಯಸಭೆಯ ಮಾಜಿ ಸದಸ್ಯ ಎಂ.ವಿ. ರಾಜೀವ್ ಗೌಡ, ಬೆಂಗಳೂರು ನಗರ ಕಾಂಗ್ರೆಸ್ ಅಧ್ಯಕ್ಷ ನಂದಕುಮಾರ್, ಮುಖಂಡರಾದ ಅಗರ ಪ್ರಕಾಶ್, ಚನ್ನಕೇಶವ, ವೀರಣ್ಣ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಜಿಲ್ಲಾಧ್ಯಕ್ಷ ನಂದಕುಮಾರ್, ಭೂನ್ಯಾಯ ಮಂಡಳಿ ಸದಸ್ಯರಾದ ಕಲ್ಕೆರೆ ಸುನೀಲ್, ಸಿ. ವೆಂಕಟೇಶ್, ಬಿಬಿಎಂಪಿ ಮಾಜಿ ಸದಸ್ಯ ವೀರಣ್ಣ ಮುಖಂಡರಾದ ರಾಜೀವ್ ಗೌಡ, ನಿತಿನ್ ಮೋಹನ್, ಅಗರ ಪ್ರಕಾಶ್, ಡಿ.ಕೆ.ರಮೇಶ್, ಚನ್ನಕೇಶವ, ವೀರಣ್ಣ ಭರತ್ ಯಾದವ್, ಜಯರಾಮ್, ಮನೋಜ್ ಇತರರಿದ್ದರು.