Minister K H Muniyappa: ನಮ್ಮವರೇ ನನಗೆ ಮೋಸ ಮಾಡಿದರು - ಸಚಿವ ಮುನಿಯಪ್ಪ

ರಾಜ್ಯ

ರಾಘವೇಂದ್ರ ಹೆಚ್​​.ಎ

4/5/20251 min read

ಬೆಂಗಳೂರು: ನಮ್ಮವರೇ ನನಗೆ ತೊಂದರೆ ಕೊಟ್ಟರು. ಆದರೆ ದೇವರು ಅವರನ್ನು ಬಿಡಲಿಲ್ಲ! ಹೀಗೆ ಬಹಿರಂಗ ಸಭೆಯಲ್ಲೇ ನೋವು ತೋಡಿಕೊಂಡಿದ್ದು ಸಚಿವ ಕೆ ಎಚ್ ಮುನಿಯಪ್ಪ. ವಿಧಾನಸೌಧದಲ್ಲಿ ಶನಿವಾರ ಬಾಬು ಜಗಜೀವನ್ ರಾಮ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಸಚಿವ ಮುನಿಯಪ್ಪ ಭಾಷಣದ ಸಂದರ್ಭದಲ್ಲಿ ಪರೋಕ್ಷವಾಗಿ ರಮೇಶ್ ಕುಮಾರ್ ಅವರನ್ನು ಉಲ್ಲೇಖಿಸಿ ಆರೋಪ ಮಾಡಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ತಮಗಾದ ಸೋಲಿನ ಬಗ್ಗೆ ಪ್ರಸ್ತಾಪ ಮಾಡಿದ ಅವರು, ಬಾಬು ಜಗಜೀವನ್ ರಾಮ್ ರಂತೆ ನಾನು 9ಬಾರಿ ಸಂಸದನಾಗಿ ಗೆಲ್ಲುವ ಅವಕಾಶ ಇತ್ತು. ಇನ್ನೊಂದು ಬಾರಿ ಗೆದ್ದಿದ್ದರೆ ನಾನು ಅವರ ಸಾಲಿನಲ್ಲಿ ಸೇರುತ್ತಿದ್ದೆ. ಆದರೆ ಸಾಧ್ಯ ಆಗಲಿಲ್ಲ ಎಂದರು.

ಮುಂದುವರಿಯುತ್ತಾ, ನಮ್ಮವರೇ ನಮಗೆ ತೊಂದರೆ ಮಾಡಿದ್ರು. ನನಗೆ ಬಹಳ ನೋವಿದೆ. ಆದರೆ ನನಗೆ ಅನ್ಯಾಯ ಮಾಡಿದ್ದಕ್ಕೆ ದೇವರು ಅವರನ್ನು ಬಿಡಲಿಲ್ಲ. ಅವರೇ ಇದೀಗ ಅನುಭವಿಸಿದ್ದಾರೆ ಎನ್ನುವ ಮೂಲಕ ಪರೋಕ್ಷವಾಗಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮೇಲೆ ವಾಗ್ದಾಳಿ ನಡೆಸಿದರು.

ಕೋಲಾರದ ರಾಜಕೀಯಕ್ಕೆ ಸಂಬಂಧಿಸಿದಂತೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮತ್ತು ಕೆ ಎಚ್ ಮುನಿಯಪ್ಪ ನಡುವೆ ಸಾಕಷ್ಟು ಭಿನ್ನಾಭಿಪ್ರಾಯ ಇದೆ. ಕೆಲವು ಸಂದರ್ಭದಲ್ಲಿ ಅದು ಬಹಿರಂಗಗೊಂಡಿತ್ತು. ಈ ಭಿನ್ನಮತವನ್ನು ಬಗೆಹರಿಸಲು ಪ್ರಯತ್ನ ನಡೆಸಿದರೂ ಅವರು ಹಾಗೆ ಮುಂದುವರಿದಿದೆ. ಇದರ ಭಾಗವಾಗಿಯೇ ಮುನಿಯಪ್ಪ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಒಳ ಮೀಸಲಾತಿಗೆ ಬದ್ಧ :

ಇನ್ನು ಇದೇ ಸಂದರ್ಭದಲ್ಲಿ ಒಳ ಮೀಸಲಾತಿ ಕುರಿತಾಗಿ ಮಾತನಾಡಿ, ಒಳ ಮೀಸಲಾತಿ ಕೊಡಲು ನಮ್ಮ ಸರ್ಕಾರ ಬದ್ಧವಾಗಿದೆ. ಸಿಎಂ ಇದನ್ನು ಕೊಡಲು ಸಿದ್ಧ ಇದ್ದಾರೆ. ಜಾತಿಯ ವರ್ಗೀಕರಣ ಮಾಡಲು ಆಯೋಗದ ರಚನೆ ಆಗಿದೆ. ಜಾತಿ ನಮೂದು ಮಾಡುವಲ್ಲಿ ಆದ ವ್ಯತ್ಯಾಸ ಕಾರಣಕ್ಕೆ ವಿಳಂಬ ಆಗುತ್ತಿದೆ. ಯಾವುದೇ ತಪ್ಪು ಅಭಿಪ್ರಾಯ ಬೇಡ ಎಂದರು. ವಿರೋಧ ಪಕ್ಷದ ನಾಯಕರ ಮಾತು ಕೇಳಬೇಡಿ. ಸರ್ಕಾರದ ಕಡೆಯಿಂದ ಒಳ ಮೀಸಲಾತಿ ಕೊಡಲು ವಿಳಂಬ ಮಾಡಲ್ಲ ಎಂದು ನೆರೆದ ಸಭಿಕರಲ್ಲೂ ಅವರು ಮನವಿ ಮಾಡಿಕೊಂದರು.

ಇತ್ತೀಚಿನ ಸುದ್ದಿ