ಕಾಶ್ಮೀರ ಪ್ರವಾಸದಲ್ಲಿದ್ದ ದೊಡ್ಡಬಳ್ಳಾಪುರದ ಪ್ರವಾಸಿಗರು ಸುರಕ್ಷಿತ, ಫೋಟೋ ರಿಲೀಸ್​

ದೇಶ/ವಿದೇಶ

ರಾಘವೇಂದ್ರ ಹೆಚ್​​.ಎ

4/24/20251 min read

ಕಾಶ್ಮೀರ ಸೇರಿದಂತೆ ಉತ್ತರ ಭಾರತದ ಪ್ರವಾಸ ಕೈಗೊಂಡಿದ್ದ ತೂಬಗೆರೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಕೂದಲೆಳೆ ಅಂತರದಲ್ಲಿ ಪಹಲ್ಗಾಮ್ ದಾಳಿಯಿಂದ ಪಾರಾಗಿ ಎಲ್ಲಾರೂ ಕ್ಷೇಮವಾಗಿದ್ದಾರೆ ಹಾಗೂ ತಮ್ಮ ಪ್ರವಾಸವನ್ನು ಕಾಶ್ಮೀರ ಹೊರತುಪಡಿಸಿ ಉಳಿದ ಸ್ಥಳಗಳಿಗೆ ಮುಂದುವರಿಸಿದ್ದಾರೆ.

ದೊಡ್ಡಬಳ್ಳಾಪುರ ತಾಲ್ಲೂಕಿನ ಹಾಡೋನಹಳ್ಳಿ, ಲಕ್ಷ್ಮೀದೇವಿಪುರ, ತಿರುಮಗೊಂಡನಹಳ್ಳಿ, ತಿಮ್ಮೋಜನಹಳ್ಳಿ, ತೂಬಗೆರೆ, ಹೀರೆಮುದ್ದೇನಹಳ್ಳಿ, ನೆಲಗುದಿಗೆ ಗ್ರಾಮಗಳಿಂದ 95 ಜನ 9 ದಿನಗಳ ಜಮ್ಮು ಕಾಶ್ಮೀರ ಪ್ರವಾಸ ಕೈಗೊಂಡಿದ್ದರು.

ಏ.19 ರಂದು ಬೆಳಗ್ಗೆ 21 ಜನರ ಒಂದು ತಂಡ ಅಮೃತಸರ ತಲುಪಿದರೆ, ವಿಮಾನ ಟಿಕೆಟ್ ಗೊಂದಲದ ಕಾರಣ 74 ಮಂದಿಯ ಮತ್ತೊಂದು ತಂಡ ದೇವನಹಳ್ಳಿ ಎಂ.ಆರ್. ಟ್ರಾವೆಲ್ ಏಜೆನ್ಸಿ ಮೂಲಕ ದೆಹಲಿಗೆ ತೆರಳಿ ಅಲ್ಲಿಂದ ಅಮೃತಸರದಲ್ಲಿ ಎಲ್ಲರೂ ಒಟ್ಟಾಗಿ ಸೇರಿದ್ದರು.

ಅಮೃತಸರದಲ್ಲಿ ಪ್ರೇಕ್ಷಣೀಯ ಸ್ಥಳಗಳನ್ನು ನೋಡಿಕೊಂಡು ಬಳಿಕ ಶ್ರೀನಗರಕ್ಕೆ ಪ್ರವಾಸ ತೆರಳಿದ್ದರು. ಇವರು ಉಳಿದುಕೊಳ್ಳಬೇಕಾದ ಹೋಟೆಲ್ ಉಗ್ರರ ದಾಳಿಗೆ ಒಳಗಾದ ಪಹಲ್ಲಾಮ್‌ನ ಬೈಸರನ್ ಸಮೀಪದಲ್ಲಿಯೇ ಎರಡು ದಿನಗಳ ಕಾಲ ಉಳಿದುಕೊಳ್ಳಲು ಕೊಠಡಿಗಳನ್ನು ಕಾಯ್ದಿರಿಸಿದ್ದರು. ಆದರೆ, ಆ ರಸ್ತೆಯಲ್ಲಿ ಬೆಟ್ಟ ಕುಸಿದು ಸಂಚಾರ ಸ್ಥಗಿತಗೊಂಡ ಕಾರಣ ಮಾರ್ಗ ಬದಲಿಸಿದ ಬೆಂಗಳೂರಿನ 15 ಜನ ಸೇರಿದಂತೆ 110 ಮಂದಿಯ ಪ್ರವಾಸಿಗರು, ಕಟ್ರಾ ವೈಷ್ಣವಿ ದೇವಿ ದರ್ಶನ ಮುಗಿಸಿ, ಕುನುಮೊನಾಲಿಗೆ ಹಿಂತಿರುಗಿದ್ದಾರೆ.

ಪ್ರವಾಸಿಗರ ಜೊತೆಯಲ್ಲಿರುವ ತೂಬಗೆರೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಹೀರೇಮುದ್ದೇನಹಳ್ಳಿ ರಾಜಕುಮಾರ್ ರವರ ಜೊತೆ ನಾನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಈ ಕುರಿತು ಮಾಹಿತಿ ನೀಡಿದರು.