ಮುಂದಿನ ಮಾತುಕತೆ ಏನಿದ್ದರೂ ಪಾಕ್‌ ಆಕ್ರಮಿತ ಕಾಶ್ಮೀರವನ್ನು ಹಿಂದಿರುಗಿಸುವ ಬಗ್ಗೆ ಮಾತ್ರ: PM Modi

ದೇಶ/ವಿದೇಶ

ರಾಘವೇಂದ್ರ ಹೆಚ್.ಎ

5/13/20251 min read

ನವದೆಹಲಿ: ಪಾಕಿಸ್ತಾನದ ಅಣ್ವಸ್ತ್ರ ಬೆದರಿಕೆಗೆ ಬಗ್ಗಲ್ಲ, ಭಯೋತ್ಪಾದನೆಯನ್ನು ಯಾವ ಕಾರಣಕ್ಕೂ ಸಹಿಸುವುದಿಲ್ಲ ಎಂದಿರುವ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಬಾಲ ಬಿಚ್ಚಿದರೆ ಉಗ್ರರ ಜತೆಗೆ ಉಗ್ರ ಪೋಷಕ ದೇಶಕ್ಕೂ ಭಾರಿ ಮಾರಿ ಹಬ್ಬ ಕಾದಿದೆ ಎಂಬ ಗಂಭೀರ ಎಚ್ಚರಿಕೆ ನೀಡಿದ್ದಾರೆ.

ಪಾಕ್‌ ವಿರುದ್ಧ 'ಆಪರೇಷನ್‌ ಸಿಂದೂರ' ಬಳಿಕ ಮೊದಲ ಬಾರಿಗೆ ಸೋಮವಾರ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು ಕಾರ್ಯಾಚರಣೆಯಿಂದ ಪಾಕ್‌ ಅನುಭವಿಸಿರುವ ಮರ್ಮಾಘಾತ ಹಾಗೂ ಭಯೋತ್ಪಾದನೆ ವಿಚಾರದಲ್ಲಿ ಭಾರತದ ಮುಂದಿನ ನಡೆಯ ಬಗ್ಗೆ ಪ್ರಖರ ಮಾತುಗಳಲ್ಲಿ ವಿವರಿಸಿದರು. ಭಾರತೀಯ ಸೇನೆಯ ಶೌರ್ಯ ಸಾಹಸ, ಭಾರತೀಯರ ಒಗ್ಗಟ್ಟಿನ ಶಕ್ತಿಯನ್ನು ಕೊಂಡಾಡಿದ ಪ್ರಧಾನಿ, ''ಭಾರತದ ಪರಾಕ್ರಮಿ ಸೇನೆಗೆ, ಸಶಸ್ತ್ರ ಪಡೆಗೆ, ನಮ್ಮ ಗುಪ್ತಚರ ಇಲಾಖೆಗೆ, ನಮ್ಮ ವಿಜ್ಞಾನಿಗಳಿಗೆ ಸಮಸ್ತ ಭಾರತೀಯರ ಪರವಾಗಿ ವಂದಿಸುತ್ತೇನೆ ಎಂದು ಕೊಂಡಾಡಿದರು.

ಕಾಶ್ಮೀರ ಹಿಂದಿರುಗಿಸುವ ಬಗ್ಗೆ ಮುಂದಿನ ಮಾತು

ಪಾಕಿಸ್ತಾನದ ಜತೆ ಮುಂದಿನ ಮಾತುಕತೆ ಏನಿದ್ದರೂ ಅದು ಪಾಕ್‌ ಆಕ್ರಮಿತ ಕಾಶ್ಮೀರವನ್ನು ಹಿಂದಿರುಗಿಸುವ ಬಗ್ಗೆ ಮತ್ತು ಉಗ್ರರ ವಿರುದ್ಧ ಕ್ರಮದ ಮಾತ್ರ ಎಂದು ಪ್ರಧಾನಿ ನರೇಂದ್ರ ಮೋದಿ ನೆರೆ ದೇಶಕ್ಕೆ ಖಡಕ್‌ ಸಂದೇಶ ರವಾನಿಸಿದ್ದಾರೆ.'ಯಾವುದೇ ಅಣ್ವಸ್ತ್ರ ಬೆದರಿಕೆಯನ್ನು ಭಾರತ ಸಹಿಸುವುದಿಲ್ಲ. ಪಾಕ್‌ ವಿರುದ್ಧ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದೇವೆ. ನೆರೆ ದೇಶದ ವರ್ತನೆಯ ಆಧಾರದ ಮೇಲೆ ನಮ್ಮ ಮುಂದಿನ ನಡೆ ನಿರ್ಧಾರವಾಗಲಿದೆ. 'ಆಪರೇಷನ್‌ ಸಿಂದೂರ' ಈಗ ಭಯೋತ್ಪಾದನೆ ವಿರುದ್ಧ ಭಾರತದ ಹೊಸ ನೀತಿಯಾಗಿದೆ,'' ಎಂದು ಗುಡುಗಿದ್ದಾರೆ.

ಯುದ್ಧ ನಿಲ್ಲಿಸಲು ಕಾರಣ ಅಮೆರಿಕ ಮಧ್ಯಸ್ಥಿತಿಕೆ ಅಲ್ಲ

''ಪಾಕಿಸ್ತಾನ ಮಿಲಿಟರಿ ಕಾರ್ಯಾಚರಣೆ ನಿಲ್ಲಿಸುವಂತೆ ಬೇಡಿಕೊಂಡಿತು. ಮುಂದೆ ಇಂತಹ ದುಸ್ಸಾಹಸ ಮಾಡುವುದಿಲ್ಲವೆಂದು ಭರವಸೆ ನೀಡಿದ ಬಳಿಕವಷ್ಟೇ ಭಾರತ ದಾಳಿ ನಿಲ್ಲಿಸಿತು,'' ಎಂದು ಮೋದಿ ಹೇಳಿದ್ದಾರೆ. ಅಮೆರಿಕದ ಮಧ್ಯಸ್ಥಿಕೆ ಬಳಿಕ ಭಾರತ ಪಾಕ್‌ ವಿರುದ್ಧ ದಾಳಿ ನಿಲ್ಲಿಸಿತೆಂಬ ವಾದವನ್ನು ಅವರು ಪರೋಕ್ಷವಾಗಿ ತಳ್ಳಿಹಾಕಿದ್ದಾರೆ.

ದೇಶದ ಹೆಣ್ಣು ಮಕ್ಕಳಿಗೆ ಅರ್ಪಣೆ

'ಆಪರೇಷನ್‌ ಸಿಂದೂರ'ವನ್ನು ದೇಶದ ಹೆಣ್ಣು ಮಕ್ಕಳಿಗೆ ಸಮರ್ಪಿಸುವುದಾಗಿ ಮೋದಿ ಹೇಳಿದ್ದಾರೆ. ''ಇಂದು, ನಾನು ಈ ಸಶಸ್ತ್ರಪಡೆಗಳ ಶೌರ್ಯ, ಧೈರ್ಯ, ಸಾಹಸವನ್ನು ನಮ್ಮ ದೇಶದ ಪ್ರತಿಯೊಬ್ಬ ತಾಯಿಗೆ, ದೇಶದ ಪ್ರತಿಯೊಬ್ಬ ಸಹೋದರಿಗೆ ಮತ್ತು ದೇಶದ ಪ್ರತಿಯೊಬ್ಬ ಮಗಳಿಗೆ ಅರ್ಪಿಸುತ್ತೇನೆ,'' ಎಂದು ಹೇಳಿದ್ದಾರೆ,

ಸಿಂದೂರ ಅಳಿಸಿದ್ದರ ಪರಿಣಾಮ ಅರಿವಾಗಿದೆ

''ಪಹಲ್ಗಾಮ್‌ ದಾಳಿಯು ಭಯೋತ್ಪಾದನೆಯ ಅತ್ಯಂತ ಕ್ರೂರ ಮುಖವಾಗಿದೆ. ಇದು ನನಗೆ ವೈಯಕ್ತಿವಾಗಿಯೂ ಅತ್ಯಂತ ಘಾಸಿ ಉಂಟು ಮಾಡಿದೆ. ಆದರೆ, ಶತ್ರುಗಳಿಗೆ ಈಗ ನಮ್ಮ ಹೆಣ್ಣು ಮಕ್ಕಳ ಸಿಂಧೂರ ಅಳಿಸಿದ್ದರ ಪರಿಣಾಮ ಏನೆಂಬುದು ಎಂಬುದು ಚೆನ್ನಾಗಿ ಅರ್ಥವಾಗಿದೆ,'' ಎಂದು ಮೋದಿ ಹೇಳಿದ್ದಾರೆ.

ವ್ಯಾಪಾರ, ರಾಜತಾಂತ್ರಿಕ ಸಮರ ನಿಂತಿಲ್ಲ

ಪಾಕ್‌ ವಿರುದ್ಧ ಭಾರತದ ಮಿಲಿಟರಿ ಕಾರ್ಯಾಚರಣೆ ನಿಂತರೂ, ರಾಜತಾಂತ್ರಿಕ, ವ್ಯಾಪಾರ ಮತ್ತು ಜಲ ಸಮರ ಮುಂದುವರಿಯಲಿದೆ ಎಂದು ಪ್ರಧಾನಿ ಸ್ಪಷ್ಟಪಡಿಸಿದ್ದಾರೆ. ಭಯೋತ್ಪಾದನೆ-ಸಂಧಾನ ಮಾತುಕತೆ(ಟೆರರ್‌-ಟಾಕ್‌) ಭಯೋತ್ಪಾದನೆ-ವ್ಯಾಪಾರ ಸಂಬಂಧ(ಟೆರರ್‌-ಟ್ರೇಡ್‌) ಹಾಗೂ ರಕ್ತ ಮತ್ತು ನೀರು (ಸಿಂಧೂ ಜಲ ಒಪ್ಪಂದ) ಒಟ್ಟಿಗೆ ಸಾಗುವುದಿಲ್ಲ ಎಂದು ಹೇಳಿದ್ದಾರೆ.