2027 ಕ್ಕೆ ಬೆಂಗಳೂರು ಉತ್ತರಕ್ಕೆ ಎತ್ತಿನಹೊಳೆ ನೀರು, ಹೊಸಕೋಟೆಗೆ ನಮ್ಮ ಮೆಟ್ರೋ ಮಂಜೂರು: ಡಿಕೆಶಿ ಶಪಥ.

ಸ್ಥಳೀಯ ಸುದ್ದಿರಾಜಕೀಯ

ಧರ್ಮ ಬಸವನಪುರ.

7/21/20251 min read

ಹೊಸಕೋಟೆ: ಬೆಂಗಳೂರು ನಗರಕ್ಕೆ  ಹೊಂದಿಕೊಂಡಿರುವ ಹೊಸಕೋಟೆಗೆ ಶೀಘ್ರ ಮೆಟ್ರೋ ಸಂಪರ್ಕ ಕಲ್ಪಿಸಲು ಅಗತ್ಯ ಯೋಜನೆ ಸಿದ್ಧಪಡಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೇಳಿದರು.

ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಹೊಸಕೋಟೆ ತಾಲ್ಲೂಕಿನ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ತಾಲ್ಲೂಕು ಪಂಚಾಯಿತಿ ಹೊಸಕೋಟೆ ಹಾಗೂ 28 ಗ್ರಾಮ ಪಂಚಾಯತಿಗಳ ವತಿಯಿಂದ ಇ-ಸ್ವತ್ತು ಹಾಗೂ ಹಕ್ಕು ಪತ್ರ ಹಾಗೂ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯಗಳ ವಿತರಣಾ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಈ ಭಾಗಕ್ಕೆ 2027 ರ ಒಳಗೆ ಎತ್ತಿನಹೊಳೆ ನೀರು ನೀಡಬೇಕು ಎಂದು ನಾವು ಶಪಥ ಮಾಡಿದ್ದೇವೆ. ಬೆಂಗಳೂರು ಉತ್ತರ ಭಾಗಕ್ಕೆ ನೀರು ಹರಿಸುವ ಕೆಲಸ ನಾವು ಮಾಡಿಯೇ ಸಿದ್ಧ. ಇಲ್ಲಿನ ಅಂತರ್ಜಲ ಹೆಚ್ಚಳ ಮಾಡಿ ಜನರಿಗೆ ಕುಡಿಯುವ ನೀರು ಒದಗಿಸಬೇಕು ಎಂಬುದು ನಮ್ಮ ಕನಸು. ಈ‌ ಕೆಲಸವನ್ನು ಬಿಜೆಪಿಯವರು, ಬೊಮ್ಮಾಯಿ, ಯಡಿಯೂರಪ್ಪ ಅವರು ಮಾಡಿದ್ದರೇ? ಇದೆಲ್ಲವೂ ಮೋದಿ ಅವರ ಕಾಲದಲ್ಲಿ ಆಗಿತ್ತೇ? ಇದೆಲ್ಲವೂ ಕಾಂಗ್ರೆಸ್ ಕೊಡುಗೆ ಎಂದರು.

ಹೊಸಕೋಟೆ ಭಾಗಕ್ಕೆ ಮೆಟ್ರೋ ಮಾರ್ಗ ತರಲು ಈಗಾಗಲೇ ಡಿಪಿಆರ್ ಮಾಡಲು ತೀರ್ಮಾನ ಮಾಡಿದ್ದೇವೆ. ನಮ್ಮ ಅವಧಿಯೊಳಗೆ ಮೆಟ್ರೋ ಮಂಜೂರು ಕೆಲಸ ಮಾಡುತ್ತೇನೆ" ಎಂದು ಹೇಳಿದರು.

ನಮ್ಮ ಕಾಲದಲ್ಲಿ ನಾವು ಏನು ಕೆಲಸ ಮಾಡಿದ್ದೇವೆ, ನೀವು ಏನು ಮಾಡಿದ್ದೀರಿ ಎಂದು ಸದನದಲ್ಲಿ ಮಾತನಾಡೋಣ ಬನ್ನಿ ಎಂದು ವಿಪಕ್ಷಗಳಿಗೆ ಆಹ್ವಾನ ನೀಡುತ್ತೇನೆ. ಎತ್ತಿನಹೊಳೆಯಿಂದ ನೀರು ತೆಗೆಯಲು ಆಗುವುದೇ ಇಲ್ಲ ಎಂದು ಕುಮಾರಸ್ವಾಮಿ ಹೇಳುತ್ತಿದ್ದರು. ಆದರೆ ಈಗ 40 ಮೀ. ಎತ್ತರದಲ್ಲಿ ಸೇತುವೆ ನಿರ್ಮಾಣ ಮಾಡಿ ಕಾಲುವೆ ಮೂಲಕ ನೀರು ಹರಿಸಲಾಗುತ್ತಿದೆ. ಇದು ದೇಶದ ಮಾದರಿ ಯೋಜನೆ. ಕಳೆದ ವಾರ ದೊಡ್ಡಬಳ್ಳಾಪುರ, ಕೊರಟಗೆರೆಗೆ ತೆರಳಿ ಯೋಜನೆ ಪ್ರಗತಿ ನೋಡಿಕೊಂಡು ಬಂದೆ ಎಂದರು.

"ಈ ಭಾಗದ ಆಸ್ತಿಗಳೆಲ್ಲ ಮುಂದಿನ ದಿನಗಳಲ್ಲಿ ಬೆಂಗಳೂರಿನ ಆಸ್ತಿಗಳಾಗುವುದರಲ್ಲಿ ಅನುಮಾನವಿಲ್ಲ. ಈಗಾಗಲೇ ಈ ಭಾಗದ ಅಭಿವೃದ್ಧಿಗೆ ಅಡಿಪಾಯ ಹಾಕಿದ್ದೇವೆ. ನಿಮ್ಮ ಊರಿನ ಅಳಿಯನನ್ನೇ ಎಂಡಿಯನ್ನಾಗಿ ನೇಮಕ ಮಾಡಿದ್ದೇವೆ. ಅವರ ಬಳಿ ಪೇಪರ್ ಇದೆ, ನನ್ನ ಬಳಿ ಪೆನ್ನಿದೆ ಎಂದರು.

"ಹುಟ್ಟಿದಾಗ ಭೂಮಿ ಮೇಲಿರುತ್ತೇವೆ. ಸತ್ತಾಗ ಭೂಮಿ ಕೆಳಗಿರುತ್ತೇವೆ. ಆದರೆ ಸಾಧನೆಗಳು ನಮ್ಮ ಮೇಲಿರುತ್ತವೆ. ಕೆಂಗಲ್ ಹನುಮಂತಯ್ಯ ಅವರು, ದೇವರಾಜ ಅರಸು ಅವರು ಸಿದ್ದರಾಮಯ್ಯ ಅವರನ್ನು ಅವರ ಕೆಲಸಗಳಿಗಾಗಿ ನೆನಪಿಸಿಕೊಳ್ಳುತ್ತೇವೆ. 19 ಸಾವಿರ ಕೋಟಿಯಷ್ಟು ಸಬ್ಸಿಡಿಯನ್ನು ರೈತರ ಪಂಪ್ ಸೆಟ್ ವಿದ್ಯುತ್ ಗೆ ನೀಡುತ್ತಿದ್ದೇವೆ. ಸಮಾಜ ಹಾಗೂ ಜನರ ಕಲ್ಯಾಣಕ್ಕೆಂದೇ 1 ಲಕ್ಷ ಕೋಟಿ ಹಣವನ್ನು ನೀಡುತ್ತಿದ್ದೇವೆ‌" ಎಂದು ತಿಳಿಸಿದರು.

"ಕೃಷ್ಣ ಬೈರೇಗೌಡರು, ಪ್ರಿಯಾಂಕ್ ಖರ್ಗೆ ಅವರು ಹಟ್ಟಿ, ತಾಂಡದಲ್ಲಿನ ಜನರ ಕಷ್ಟಗಳನ್ನು ಅರ್ಥ ಮಾಡಿಕೊಂಡು, ಒಂದು ಕೋಟಿಗೂ ಹೆಚ್ಚು ಜನರಿಗೆ ಪಟ್ಟಾ ಖಾತೆ ನೀಡಲು ಮುಂದಾಗಿದ್ದಾರೆ. ಬೆಂಗಳೂರಿನಲ್ಲಿ ಬಿ ಖಾತೆಗಳನ್ನು ಎ ಖಾತೆಗಳನ್ನಾಗಿ ಬದಲಾವಣೆ ಮಾಡಲು ಕ್ರಮ ತೆಗೆದುಕೊಂಡಿದ್ದೇವೆ‌" ಎಂದರು.

"ದೇಶದ ಯಾವ, ಯಾವ ರಾಜ್ಯದಲ್ಲಿ ಚುನಾವಣೆ ಬರುತ್ತದೆಯೋ ಅಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳನ್ನು ನಕಲು ಮಾಡಿ ಘೋಷಣೆ ಮಾಡುವುದೇ ಬಿಜೆಪಿ ಕೆಲಸವಾಗಿದೆ. ಬಿಹಾರ,‌ ದೆಹಲಿ, ಮಹಾರಾಷ್ಟ್ರ, ಗುಜರಾತ್ ಸೇರಿದಂತೆ ಅನೇಕ ಕಡೆ ಗ್ಯಾರಂಟಿ ಯೋಜನೆಗಳನ್ನು ನಮ್ಮನ್ನು ನೋಡಿಕೊಂಡು ಜಾರಿಗೆ ತಂದಿದ್ದಾರೆ. ವಿರೋಧ ಮಾಡಿದವರೇ ನಮ್ಮನ್ನು ಅನುಸರಿಸುತ್ತಿದ್ದಾರೆ" ಎಂದರು.

"ಮಲ್ಲಿಕಾರ್ಜುನ ಖರ್ಗೆ ಅವರು ಅವರ ಕ್ಷೇತ್ರದಲ್ಲಿ ಇಡೀ ದೇಶ ಹೆಮ್ಮೆ ಪಡುವಂತಹ ಕೆಲಸಗಳನ್ನು ಮಾಡಿದ್ದಾರೆ. 371 ಜೆ ಮೂಲಕ ಕ್ರಾಂತಿ ಮಾಡಿದ್ದಾರೆ. ಇತ್ತೀಚೆಗೆ 1 ಸಾವಿರ ಕೋಟಿಯನ್ನು ರಸ್ತೆ ಅಭಿವೃದ್ಧಿಗೆ ನೀಡಲಾಯಿತು" ಎಂದರು.

"ಐದು ಗ್ಯಾರಂಟಿಗಳು ಸೇರಿ ಅನೇಕ ಯೋಜನೆಗಳು ಒಂದೇ ಒಂದು ರೂಪಾಯಿ ಲಂಚ ಇಲ್ಲದೇ ಜಾರಿಗೆ ಬಂದಿದೆ. ಇಂತಹ ಪರಿಶುದ್ಧ ಆಡಳಿತವನ್ನು ನಾವು ನೀಡುತ್ತಿದ್ದೇವೆ. ಬಿಜೆಪಿಯವರು ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ನೀಡುತ್ತೇವೆ ಎಂದು ಪ್ರಧಾನಿ‌ ಅವರಿಂದ ಬಜೆಟ್ ಅಲ್ಲಿ ಘೋಷಣೆ ಮಾಡಿದರು. ಅವರದ್ದು ಬರೀ ಖಾಲಿ ಮಾತು" ಎಂದರು.

"ದಾನ ಧರ್ಮ ಮಾಡುವ ಈ ಕೈ ಅಧಿಕಾರದಲ್ಲಿ ಇರುವ ಕಾರಣಕ್ಕೆ ನಾವು ಅನೇಕ ಯೋಜನೆಗಳ ಮೂಲಕ ನಿಮ್ಮ ಋಣ ತೀರಿಸುವ ಕೆಲಸ ಮಾಡುತ್ತಿದ್ದೇವೆ. ಹೊಸಕೋಟೆ ಭಾಗದಲ್ಲಿ ಹೆಚ್ಚು ಹಾಲು ಉತ್ಪಾದನೆಯಾಗುತ್ತದೆ. ನಮ್ಮ ಸರ್ಕಾರ ಕ್ಷೀರಧಾರೆ ಯೋಜನೆ ಮೂಲಕ ರೈತರ ಬೆಂಬಲಕ್ಕೆ ನಿಂತಿತ್ತು. 5 ರೂಪಾಯಿ ಸಹಾಯಧನ ನೀಡುವ ಮೂಲಕ ನಿಮಗೆ ನೆರವಾಗಿದ್ದು ನಾವು" ಎಂದರು.

"ರಾಹುಲ್ ಗಾಂಧಿ ಅವರೊಂದಿಗೆ ಪಾದಯಾತ್ರೆಯಲ್ಲಿ ಸಾಗುವಾಗ ವಯಸ್ಸಾದ ಮಹಿಳೆ ಸೌತೆಕಾಯಿ ತಂದು ರಾಹುಲ್ ಗಾಂಧಿ ಅವರಿಗೆ ಕೊಟ್ಟು, ಇದು ನಿಮ್ಮ ಅಜ್ಜಿ ಕೊಟ್ಟ ಭೂಮಿಯಲ್ಲಿ ಬೆಳೆದಿದ್ದೇನೆ ಎಂದರು. ಉಳುವವನಿಗೆ ಭೂಮಿ ಕಾರ್ಯಕ್ರಮ ನೀಡಿದ್ದು ದೇವರಾಜ ಅರಸು ಕಾಲದಲ್ಲಿ ನಮ್ಮ ಸರ್ಕಾರ. ಉಳುವವನಿಗೆ ಭೂಮಿ, ಪಿಂಚಣಿ ಎಲ್ಲವೂ ನಮ್ಮ ಕಾಂಗ್ರೆಸ್ ಸರ್ಕಾರದ ಕೊಡುಗೆ ಇಂತಹ ಯಾವುದಾದರೂ ಒಂದು ಕಾರ್ಯಕ್ರಮವನ್ನು ಬಿಜೆಪಿ ಅಥವಾ ಜೆಡಿಎಸ್ ಕೊಟ್ಟಿದೆಯೇ?" ಎಂದು ಸವಾಲೆಸೆದರು.

"ಶರತ್ ಬಚ್ಚೇಗೌಡರು, ಮುನಿಯಪ್ಪನವರು, ಶ್ರೀನಿವಾಸ್ ಅವರನ್ನು ಗ್ರಾಮಾಂತರದ ಜನರು ಗೆಲ್ಲಿಸಿ ನಮಗೆ ಶಕ್ತಿ ತುಂಬಿದ್ದೀರಿ. ಉಪಚುನಾವಣೆಯಲ್ಲಿ ಮೂರು ಜನರನ್ನು ಗೆಲ್ಲಿಸಿ 140 ಶಾಸಕರ ಬಲವನ್ನು ನಮಗೆ ನೀಡಿರುವ ನಿಮ್ಮ ಸೇವೆಗೆ ನಾವು ಸನ್ನದ್ದರಾಗಿದ್ದೇವೆ. ಉಪಚುನಾವಣೆಯಲ್ಲಿ ಹಳೇ ಗಿರಾಕಿಗಳು ಬೇಡ ಎಂದು ಬದಲಾವಣೆಗೆ ನಾಂದಿ ಹಾಡಿದವರು ಕರ್ನಾಟಕದ ಜನರು" ಎಂದು ಹೇಳಿದರು.

ನಮ್ಮ ಸರ್ಕಾರ ಇಷ್ಟೆಲ್ಲಾ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿರುವಾಗ, ಬಿಜೆಪಿಯವರ ಸಾಧನೆಯೇನು? ಅಡುಗೆ ಅನಿಲದ ಬೆಲೆ ಇಂದು ಗಗನಕ್ಕೆ ಹೋಗಿದೆ. ಜಿಎಸ್‌ಟಿ ಹೆಸರಿನಲ್ಲಿ ತರಕಾರಿ, ಎಳನೀರು ಮಾರುವವನಿಗೂ ನೋಟಿಸ್‌ ನೀಡಲಾಗುತ್ತಿದೆ. ಬಿಜೆಪಿಯವರು ಜಿಎಸ್‌ಟಿ ತಂದು ಬಡವರಿಗೆ ತೊಂದರೆ ಕೊಡುವ ಕೆಲಸ ಮಾಡುತ್ತಿದ್ದಾರೆ. ಇದು ಕೇಂದ್ರ ಸರ್ಕಾರದ ಸಾಧನೆ. ವ್ಯಾಪಾರಿಗಳು ಚಿಂತಿಸಬೇಕಾಗಿಲ್ಲ, ಅವರ ಹಿತಾಸಕ್ತಿಗಳನ್ನು ರಕ್ಷಿಸಲು ನಾವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ, ಕಳೆದ ಎರಡು ವರ್ಷಗಳಿಂದ ಅನುದಾನಕ್ಕಾಗಿ ಕೇಂದ್ರ ಸರ್ಕಾರಕ್ಕೆ ಹಲವಾರು ಮನವಿಗಳನ್ನು ಮಾಡಿದ್ದೇವೆ, ಯಾವುದೇ ಬಿಜೆಪಿ ಸಂಸದರೂ ಕೂಡ ರಾಜ್ಯದ ಪರವಾಗಿ ಮಾತನಾಡುತ್ತಿಲ್ಲ. ಅವರಿಗೆ ರಾಜ್ಯದ ಬಡವರ ಬಗ್ಗೆ ಕಾಳಜಿ ಇಲ್ಲ. ಕರ್ನಾಟಕವು ಕೇಂದ್ರಕ್ಕೆ ತೆರಿಗೆ ರೂಪದಲ್ಲಿ ನೀಡುವ ಪ್ರತಿ 100 ರೂ.ಗೆ ಕೇವಲ 13 ರೂ. ಮಾತ್ರ ಪಡೆಯುತ್ತಿದೆ ಎಂದು ಕಿಡಿಕಾರಿದರು.

"ಉಪಕಾರ ಎನ್ನುವುದು ಪುಸ್ತಕದಲ್ಲಿ ‌ಇರುವುದಿಲ್ಲ, ಮಾಡುವ ಮನಸ್ಸಿನಲ್ಲಿರುತ್ತದೆ. ಈ ಭಾಗದ ಒಬ್ಬ ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ಹೋದ. ಹೋದವನನ್ನು ಎಂಎಲ್‌ಸಿ ಮಾಡಿದರು. ಆದರೆ ಒಂದೇ ಒಂದು ದಿನ‌ ಜನರ ಕಷ್ಟ ಸುಖ ಕೇಳುತ್ತಿಲ್ಲ. ಇವತ್ತು ವೇದಿಕೆಗೆ ಬಂದು ನಮ್ಮ ತಪ್ಪು ಒಪ್ಪುಗಳನ್ನು ಹೇಳಬೇಕಿತ್ತು. ಆದರೆ ಆತನಿಗೆ ಧಮ್ ಇಲ್ಲ, ಶಕ್ತಿ, ಧೈರ್ಯವಿಲ್ಲ" ಎಂದು ಲೇವಡಿ ಮಾಡಿ ಎಂಟಿಬಿ ನಾಗರಾಜ್ ಅವರಿಗೆ ಟಾಂಗ್ ಕೊಟ್ಟರು.

ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ಮಾತನಾಡಿ ಚುನಾವಣೆಯಲ್ಲಿ ಮಾತು ನೀಡಿದಂತೆ ನಾವು ಎಲ್ಲಾ ಗ್ಯಾರಂಟಿ ಯೋಜನೆಗಳು ಜಾರಿಗೊಳಿಸಿದ್ದು ನುಡಿದಂತೆ ನಡೆದಿದ್ದೇವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಗೆ ಮೆಟ್ರೋ, ಯುಜಿಡಿ, ಎತ್ತಿನಹೊಳೆ ಯೋಜನೆಯು ಆದಷ್ಟು ಬೇಗ ಬರಬೇಕು ಎನ್ನುವುದು ನನ್ನ ಒತ್ತಾಸೆಯಾಗಿದೆ ಎಂದರು.

ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಮಾತನಾಡಿ ಸರ್ವರಿಗೂ ಸಮಾನ ಅವಕಾಶ ಎಂಬ ಧ್ಯೇಯ ದೊಂದಿಗೆ ಎಲ್ಲಾ ವರ್ಗದವರಿಗೂ ಸೌಲಭ್ಯ ನೀಡಲಾಗುತ್ತಿದೆ. ನವ ಕರ್ನಾಟಕ ನಿರ್ಮಾಣದ ದಿಟ್ಟ ಹೆಜ್ಜೆ ಇಟ್ಟಿರುವ ನಮ್ಮ ಸರ್ಕಾರ ಐದು ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದೇವೆ. ವಿರೋದ ಪಕ್ಷಗಳು ವಿರೋದ ಮಾಡಿದರು ನಾವು ಜಾರಿಗೆ ತಂದ ಗ್ಯಾರಂಟಿ ಯೋಜನೆಗಳನ್ನು ಇಡೀ ದೇಶದಲ್ಲಿ ಯಾರು ಜಾರಿಗೆ ತಂದಿಲ್ಲ. ಪ್ರತಿ ಕುಟುಂಬವು 5-6 ಸಾವಿರ ಪ್ರತಿ ತಿಂಗಳು ಉಳಿತಾಯ ಮಾಡಲಾಗುತ್ತಿದೆ. ಗ್ರಾಮೀಣಾಭಿವೃದ್ಧಿ ಇಲಾಖೆ, ಐಟಿ ಇಲಾಖೆಯಲ್ಲಿ ರಾಜ್ಯ ನಂಬರ್ ಒನ್ ಸ್ಥಾನದಲ್ಲಿದ್ದೇವೆ.

ವಿರೋಧ ಪಕ್ಷಗಳ ವಿರೋಧಕ್ಕೆ ಮಣಿಯದೆ ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳನ್ನು ಇಡೀ ದೇಶದಲ್ಲಿ ಯಾರೂ ಜಾರಿಗೆ ತಂದಿಲ್ಲ. ನರೇಗಾ ಯೋಜನೆಯಡಿ 13 ಕೋಟಿ ಮಾನವ ದಿನಗಳು ಸೃಜಿಸಿ, ನರೇಗಾ ಕೂಲಿ ಕಾರ್ಮಿಕರ ಮಕ್ಕಳಿಗೆ ಕೂಸಿನ ಮನೆಗಳನ್ನು ನಿರ್ಮಿಸಿದ್ದು. ಅಲ್ಲಿ 50000 ಮಕ್ಕಳು ಕಲಿಯುತ್ತಿದ್ದಾರೆ ಎಂದು ಹೇಳಿದರು.

ಈಗಾಗಲೇ ರಾಜ್ಯಾದ್ಯಂತ ಮಾದರಿ ತಾಲ್ಲೂಕು ಪಂಚಾಯಿತಿ ನಿರ್ಮಿಸಲು ಉದ್ದೇಶಿಸಲಾಗಿದ್ದು ಹೊಸಕೋಟೆಯಲ್ಲಿ ಮೊದಲ ಮಾದರಿ ತಾಲ್ಲೂಕು ಪಂಚಾಯಿತಿ ನಿರ್ಮಿಸಲಾಗುವುದು ಎಂದರು.

ಶಾಸಕ ಶರತ್ ಬಚ್ಚೇಗೌಡ ಮಾತನಾಡಿ,ಹೊಸಕೋಟೆಗೆ ಮೆಟ್ರೊ ಸಂಪರ್ಕ ಹಾಗೂ ಕಾವೇರಿ ನೀರು ಪೂರೈಕೆ, ಮಾದರಿ ತಾಲ್ಲೂಕು ಪಂಚಾಯಿತಿ ನಿರ್ಮಾಣ ಮಾಡುವಂತೆ ಸಚಿವರಿಗೆ ಮನವಿ ಸಲ್ಲಿಸಿದರು. 60 ಗ್ರಾಮಗಳು ಇ-ಸ್ವತ್ತು ಮುಕ್ತ ಎಂದು ಘೋಷಿಸಿದ್ದು 6000 ಇ-ಸ್ವತ್ತುನ್ನು ನೀಡಲಾಗುತ್ತಿದೆ. ಫಲಾನುಭವಿಗಳಿಗೆ 1,010 ನಿವೇಶನ ಹಕ್ಕುಪತ್ರ ವಿತರಣೆ ಮಾಡಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎ.ಬಿ ಬಸವರಾಜು, ಸಿಇಒ ಡಾ.ಕೆ.ಎನ್ ಅನುರಾಧ, ಶಾಸಕರಾದ ಶ್ರೀನಿವಾಸ್, ರವಿ, 5ನೇ ಹಣಕಾಸು ಆಯೋಗದ ಅಧ್ಯಕ್ಷ ಸಿ. ನಾರಾಯಣಸ್ವಾಮಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ರಾಜಣ್ಣ aಉಪಸ್ಥಿತರಿದ್ದರು.