ನನಗೆ ಭಿಕ್ಷೆ ನೀಡುವಷ್ಟು ನೀವು ಅರ್ಹರಲ್ಲ ! ಮಾಜಿ ಶಾಸಕರನ್ನು ಕುಟುಕಿದ ಬಮೂಲ್ ನಿರ್ದೇಶಕ ಬಿ.ಸಿ.ಆನಂದ್ ಕುಮಾರ್
ಸ್ಥಳೀಯ ಸುದ್ದಿ


ದೊಡ್ಡಬಳ್ಳಾಪುರ : ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಶಾಸಕರಾಗುವ ಮೊದಲಿಂದಲೂ ನಾನು ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿದ್ದು, ಬಮೂಲ್ ನಿರ್ದೇಶಕ ಸೇರಿದಂತೆ ನಾನು ಅನುಭವಿಸಿರುವ ಅಧಿಕಾರ ಹಾಗೂ ಹುದ್ದೆಗಳು ರಾಜಕೀಯವಾಗಿ ನನ್ನ ಶ್ರಮದಿಂದ ಗಳಿಸಿರುವುದೇ ಹೊರತು ನಿಮ್ಮ ಭಿಕ್ಷೆಯಿಂದ ಬಂದಿದ್ದಲ್ಲ ಎಂದು ಬಮೂಲ್ ನಿರ್ದೇಶಕ ಬಿ.ಸಿ.ಆನಂದ್ ಕುಮಾರ್ ತಿರುಗೇಟು ನೀಡಿದರು.
ನಗರದ ಬಮೂಲ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಹಿಂದಿನ ಬಮೂಲ್ ಚುನಾವಣೆ, ಕೆಎಂಎಫ್ ನಿರ್ದೇಶಕ ಸ್ಥಾನ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗೆ ನಿಲ್ಲಲು ನಾನು ಹಾಕಿದ ಭಿಕ್ಷೆ ಎನ್ನುವ ಮಾಜಿ ಶಾಸಕರ ಮಾತಿನಲ್ಲಿ ಸತ್ಯವಿಲ್ಲ. ಅವರು 2013ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಂದರು. ಆದರೆ ನಾನು 1995ರಿಂದಲೇ ಕಾಂಗ್ರೆಸ್ ಸಕ್ರಿಯ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೆ. ಮಾಜಿ ಶಾಸಕರಾದ ಗಂಟಿಗಾನಹಳ್ಳಿ ಕೃಷ್ಣಪ್ಪ ಅವರ ಪರವಾಗಿ ಕೆಲಸ ಮಾಡಿದ್ದೆ. 1997ರಲ್ಲಿ ಮಜರಾಹೊಸಹಳ್ಳಿ ಪಂಚಾಯಿತಿ ಕಾಂಗ್ರೆಸ್ ತೆಕ್ಕೆಗೆ ಬರಲು ಶ್ರಮಿಸಿದ್ದೆ. ಡಿ.ಕೆ.ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ರಾಜೀವ್ ಗಾಂಧಿ ಶಕ್ತಿ ಕೇಂದ್ರದ ಪ್ರತಿನಿಯಾಗಿ ಕೆಲಸ ಮಾಡಿದ್ದೆ. ಮಾಜಿ ಶಾಸಕರು ರಾಜಕೀಯವಾಗಿ ಸಕ್ರಿಯವಾಗುವ ಮುಂಚೆಯೇ ನಾನು ಗ್ರಾ.ಪಂ ಸದಸ್ಯನಾಗಿ, ಉಪಾಧ್ಯಕ್ಷನಾಗಿ ನಂತರ ಅಧ್ಯಕ್ಷನಾಗಿ ನಂತರ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಸಹ ಸ್ಪರ್ಧಿಸಿ, ಕಡಿಮೆ ಅಂತರದಿಂದ ಸೋತಿದ್ದೆ. ನನಗೆ ಕೊಟ್ಟ ಅಧಿಕಾರಕ್ಕಿಂತ ಅದರ ಎರಡು ಪಟ್ಟು ಹೆಚ್ಚು ಪಕ್ಷಕ್ಕಾಗಿ ದುಡಿದಿದ್ದೇನೆ. ಮಾಜಿ ಶಾಸಕರಾದ ಜೆ.ನರಸಿಂಹಸ್ವಾಮಿ, ಆರ್.ಜಿ.ವೆಂಕಟಾಚಲಯ್ಯ ಅವರ ಗೆಲುವಿಗೆ ಶ್ರಮಿಸಿದ್ದೇನೆ. ಆದರೆ ಯಾವುದೇ ಆಸೆ ಆಮಿಷಕ್ಕೆ ಬಲಿಯಾಗಿಲ್ಲ. ಅದನ್ನು ನೀವು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಜೆ.ನರಸಿಂಹಸ್ವಾಮಿ ಅವರಿಗೆ ನಾನು ಬೆಂಬಲಿಸಿದಾಗ ಪಕ್ಷಕ್ಕಿಂತ ವ್ಯಕ್ತಿ ಮುಖ್ಯವಾಗಿತ್ತು. ಈಗಿನ ಶಾಸಕ ಧೀರಜ್ ಮುನಿರಾಜು ಸಹ ಉತ್ತಮ ವ್ಯಕ್ತಿ ಎಂದು ಬೆಂಬಲಿಸಿದ್ದೇನೆ. ಭ್ರಷ್ಟರಾದರೆ ಅವರು ಯಾರೇ ಆಗಲೀ ಅವರನ್ನು ನಾನು ಬೆಂಬಲಿಸುವುದಿಲ್ಲ. ಬಮೂಲ್ ಚುನಾವಣೆಗೆ ನನ್ನ ಯೋಗ್ಯತೆ ನೋಡಿ ಸ್ಫರ್ಧಿಸಲು ಅವಕಾಶ ನೀಡಿದ್ದರು.
ನಾನು ಕಾಂಗ್ರೆಸ್ ಪಕ್ಷದಲ್ಲಿ ದುಡಿದಿದ್ದೇನೆ, ಭಿಕ್ಷೆ ಬೇಡಿಲ್ಲ, ಅಷ್ಟು ಕೆಳಮಟ್ಟದ ರಾಜಕಾರಣಿ ನಾನಲ್ಲ, ನನಗೆ ನೀವು ಭಿಕ್ಷೆ ಕೊಡುವಷ್ಟು ಯೋಗ್ಯರಲ್ಲ, ಆ ಯೋಗ್ಯತೆಯೂ ನಿಮಗಿಲ್ಲ ಎಂದು ಕುಟುಕಿದರು.
ನಾನು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಪಟ್ಟಾ ಶಿಷ್ಯ. ಜಿಲ್ಲಾ ಪಂಚಾಯಿತಿ ಚುನಾವಣೆಗೆ ನಾನು ಅವರ ಬಳಿ ಅರ್ಜಿ ಹಾಕಿರಲಿಲ್ಲ. ಅದಕ್ಕೆ ಬಲವಂತ ಮಾಡಿದವರು ಅವರು. ಅಂದು ಸಿ.ನಾರಾಯಣಸ್ವಾಮಿ, ಡಾ.ವಿಜಯಕುಕುಮಾರ್ ಅವರನ್ನು ಎದುರಿಸುವ ಶಕ್ತಿ ನಿಮ್ಮಲ್ಲಿ ಇರಲಿಲ್ಲ .ನಾನು ಯಾವತ್ತೂ ನಿಮ್ಮ ಬಳಿ ಭಿಕ್ಷೆ ಬೇಡಿಲ್ಲ ನನಗೆ ನಿಗಮ ಮಂಡಳಿಯಲ್ಲಿ ಸ್ಥಾನ ಕೊಟ್ಟಿದ್ದರೆ ಅದು ಭಿಕ್ಷೆ ಅಂದುಕೊಳ್ಳುತ್ತೇನೆ ಎಂದರು. ನಾನು ಕೆಎಂಎಫ್ ನಿರ್ದೇಶಕರಾಗಲು ಸಹ ಭಿಕ್ಷೆ ಕೊಟ್ಟಿದ್ದು ಎಂದು ಹೇಳಿದ್ದೀರಿ. ಅದು ಸುಳ್ಳು ನನಗೆ ನಿರ್ದೇಶಕರಾಗುವ ಉದ್ದೇಶವೇ ಇರಲಿಲ್ಲ. ಡಿ.ಕೆ.ಶಿವಕುಮಾರ್ ಅವರು ನನ್ನನ್ನು ಕೆಎಂಎಫ್ ನಿರ್ದೇಶಕರಾಗಿಸಿದರು. ನಾನು ಕಮಿಟ್ಮೆಂಟ್ ರಾಜಕಾರಣ ಮಾಡಲ್ಲ. ನಾನು ರಾಜಕಾರಣದಲ್ಲಿ ಬಡವರ, ಆಧಿಕಾರಿಗಳ ಹಾಗೂ ಗುತ್ತಿಗೆದಾರರ ಹೊಟ್ಟೆ ಬಗೆದು ಹಣ ಸಂಪಾದನೆ ಮಾಡಿಲ್ಲ ಎಂದರು.
ನನಗೆ ದ್ರೋಹ ಬಗೆದರು ಎಂದು ಹೇಳಿದ್ದಾರೆ. ನಾನು ದ್ರೋಹ ಬಗೆಯುವ ವ್ಯಕ್ತಿಯಲ್ಲ, ನಾನು ನೇರ ನುಡಿ-ನಡೆಯ ರಾಜಕಾರಣಿ, ಏನೇ ಮಾಡಿದರೂ ಪಾರದರ್ಶಕವಾಗಿ ಹೇಳಿ ಮಾಡುತ್ತೇನೆ. ನಿಮಗೆ ದ್ರೋಹ ಬಗೆದು ಗುಂಡಿ ತೋಡವ ವ್ಯಕ್ತಿ ನಿಮ್ಮ ಬಗಲಲ್ಲೇ ಇದ್ದಾರೆ. ಶಾಸಕ ವೆಂಕಟರಮಣಯ್ಯ ಅವರು ಬಿಬಿಎಂಪಿಯಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ, ಅವರ ವಿರುದ್ಧ ಕೆಪಿಸಿಸಿಗೆ ದೂರು ಕೊಡೋಣ ಎಂದು ಕಡತದ ಸಮೇತ ನನ್ನ ಬಳಿಗೆ ಬಂದಿದ್ದರು, ಅಂತಹ ವ್ಯಕ್ತಿಯ ಮಾತು ಕೇಳಿ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ.
ಕೆಪಿಸಿಸಿ ವಕ್ತಾರರು ಆರೋಪಿಸುವಂತೆ ಡಿ.ಕೆ.ಶಿವಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಲು ರಾತ್ರೋರಾತ್ರಿ ಹೋಗಿಲ್ಲ. ಬಮೂಲ್ನಿಂದ ತಾಲೂಕಿನ ರೈತರ ಕೆಲಸಗಳಾಗಬೇಕು. ಅವರ ಮೇಲಿನ ಅಭಿಮಾನದಿಂದ ಹಾರ ಹಾಕಿ ಬಂದೆ ಎಂದರು.
ಕಾಂಗ್ರೆಸ್ ಶಕ್ತಿಹೀನ:
ತಾಲೂಕಿನಲ್ಲಿ ಒಬ್ಬ ಕಾಂಗ್ರೆಸ್ ಕಾರ್ಯಕರ್ತನೂ ನಿಮ್ಮಿಂದ ಉದ್ದಾರ ಆಗಿಲ್ಲ. ಪಕ್ಷ ಬಿಟ್ಟು ಹೊರಬಂದು ನಿಮ್ಮ ಶಕ್ತಿ ಪ್ರದರ್ಶಿಸಿ ಎಂದು ಸವಾಲು ಎಸೆದ ಅವರು, ಇವರು ಪಕ್ಷ ಬಿಟ್ಟರೆ ಕಾಂಗ್ರೆಸ್ ಫೀನಿಕ್ಸ್ ನಂತೆ ಪುಟಿದೇಳುತ್ತದೆ. ಕೊವಿಡ್ ಸಮಯದಲ್ಲಿ ಯಾರು ಜನರಿಗೆ ಸಹಾಯ ಮಾಡಿದ್ದರೋ ಅವರನ್ನು ಜನ ಬೆಂಬಲಿಸಿದ್ದಾರೆ. ಯಾರಿಗೂ ಸಹಾಯ ಮಾಡದವರನ್ನು ದೂರ ಇಟ್ಟಿದ್ದಾರೆ. ನೀವು ಶಾಸಕರಾಗಿದ್ದಾಗ ಅಕಾರಿಗಳಿಂದ, ಗುತ್ತಿಗೆದರರಿಂದ ಕಮಿಷನ್ ಹಣ ಪಡೆದಿಲ್ಲ ಎಂದು ನಿರೂಪಿಸಿ, ನಾನು ಏನು ಜನರಿಗೆ ಸಹಾಯ ಮಾಡಿದ್ದೇನೆ ನೀವು ಏನು ಮಾಡಿದ್ದೀರಿ, ಎನ್ನುವುದು ಸಾಬೀತು ಮಾಡಲು ಧರ್ಮಸ್ಥಳಕ್ಕೆ ಬನ್ನಿ ಪ್ರಮಾಣ ಮಾಡೋಣ ಎಂದು ಸವಾಲು ಹಾಕಿದರು.
ಪತ್ರಿಕಾಗೋಷ್ಠಿಯಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ತಿ.ರಂಗರಾಜು, ಬಿಜೆಪಿ ತಾಲೂಕು ಅಧ್ಯಕ್ಷ ನಾಗೇಶ್, ನಾಗರಿಕ ಹಿತರಕ್ಷಣಾ ಸಮಿತಿಯ ರವೀಂದ್ರ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.