ಯುಪಿ ವಿರುದ್ಧ ನಡೆದ ಅಂಡರ್-19 ಪಂದ್ಯವೊಂದು ನನ್ನ ಲಕ್ ಬದಲಿಸಿತು. ಅದೊಂದು ಲೋ ಸ್ಕೋರಿಂಗ್ ಮ್ಯಾಚ್ ಆಗಿದ್ದರೂ ನಾನು ರನ್ ಗಳಿಸಿದ್ದೆ. ಆ ಕ್ಷಣದಲ್ಲಿ ನನ್ನ ಮಗ ದೊಡ್ಡ ಮಟ್ಟಕ್ಕೆ ಬೆಳೆಯುತ್ತಾನೆ ಎಂದು ನನ್ನ ತಂದೆಗೆ ನಂಬಿಕೆ ಬಂದಿತು ಎಂದಿದ್ದಾರೆ.
ಕೊನೆಯ ಓವರ್ಗಳಲ್ಲಿ ಎದುರಾದ ಒತ್ತಡದ ಬಗ್ಗೆ ಮಾತನಾಡಿದ ಅವರು, ಒತ್ತಡ ಯಾವಾಗಲೂ ಇರುತ್ತದೆ. ಆದರೆ ದೇವರು ನಮಗೆ ಇದೊಂದು ಅವಕಾಶ ನೀಡಿದ್ದಾನೆ ಎಂದು ನಾನು ಭಾವಿಸುತ್ತೇನೆ. ನಾನು ಕೊನೆಯವರೆಗೂ ಕ್ರೀಸ್ನಲ್ಲಿ ಉಳಿದರೆ ಪಂದ್ಯ ಗೆಲ್ಲಿಸಬಹುದು ಎಂಬ ನಂಬಿಕೆ ನನಗಿತ್ತು. ನನ್ನ ಏರಿಯಾಗೆ ಬಾಲ್ ಬಂದರೆ ಸಿಕ್ಸರ್ ಎತ್ತುವುದು ಒಂದೇ ನನ್ನ ಪ್ಲಾನ್ ಆಗಿತ್ತು ಎಂದು ತಮ್ಮ ಬ್ಯಾಟಿಂಗ್ ಗುಟ್ಟು ಬಿಟ್ಟುಕೊಟ್ಟರು.
ನನ್ನ ಕ್ರಿಕೆಟ್ ಪಯಣ ನಿಜವಾಗಿ ಶುರುವಾಗಿದ್ದು ನನ್ನ ತಂದೆಯ ಮದುವೆಗೂ ಮೊದಲು.ನನ್ನ ಮಗ ಕ್ರಿಕೆಟಿಗನಾಗಬೇಕು ಎಂಬುದು ಅವರ ದೊಡ್ಡ ಕನಸಾಗಿತ್ತು. ಆರಂಭದಲ್ಲಿ ನಮ್ಮ ಆರ್ಥಿಕ ಪರಿಸ್ಥಿತಿ ಅಷ್ಟೇನು ಚೆನ್ನಾಗಿರಲಿಲ್ಲ. ಆದರೂ ನನ್ನ ಕನಸಿಗೆ ತಂದೆ ನೀರೆರೆದರು ಎಂದು ಸ್ಮರಿಸಿದ್ದಾರೆ.ರಾಜಸ್ಥಾನದ ಜುಂಜುನು ಎಂಬ ಸಣ್ಣ ಜಿಲ್ಲೆಯವರಾದ ಮುಕುಲ್, 12-13ನೇ ವಯಸ್ಸಿನಲ್ಲಿ ಕ್ರಿಕೆಟ್ ಆರಂಭಿಸಿದರು. ಸ್ಥಳೀಯವಾಗಿ ಉತ್ತಮ ಅಕಾಡೆಮಿಗಳಿಲ್ಲದ ಕಾರಣ ಜೈಪುರಕ್ಕೆ ಸ್ಥಳಾಂತರಗೊಂಡರು.ಟಿ20 ಕ್ರಿಕೆಟ್ನ ವೇಗಕ್ಕೆ ಹೊಂದಿಕೊಳ್ಳಲು ಗುರಗಾಂವ್ನಲ್ಲಿ ತಿಂಗಳುಗಟ್ಟಲೆ ಕಠಿಣ ಅಭ್ಯಾಸ ನಡೆಸಿದ್ದನ್ನು ನೆನಪಿಸಿಕೊಂಡಿದ್ದಾರೆ.
ಸೋಲಿನ ದವಡೆಯಲ್ಲಿದ್ದ ಎಲ್ಎಸ್ಜಿಗೆ ಮುಕುಲ್ ಆಸರೆ:
ಕೋಲ್ಕತ್ತಾ ನೈಟ್ ರೈಡರ್ಸ್ ನೀಡಿದ್ದ 182 ರನ್ಗಳ ಸವಾಲಿನ ಗುರಿ ಬೆನ್ನಟ್ಟಿದ ಲಕ್ನೋ ತಂಡ ಒಂದು ಹಂತದಲ್ಲಿ 16 ಓವರ್ಗಳಲ್ಲಿ 128 ರನ್ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಕ್ರೀಸ್ನಲ್ಲಿ ಯಾವುದೇ ಅನುಭವಿ ಬ್ಯಾಟರ್ಗಳಿಲ್ಲದ ಕಾರಣ ಕೆಕೆಆರ್ ಸುಲಭವಾಗಿ ಗೆಲ್ಲಲಿದೆ ಎಂದೇ ಭಾವಿಸಲಾಗಿತ್ತು. ಆದರೆ, 17ನೇ ಓವರ್ನಿಂದ ಶುರುವಾಗಿದ್ದೇ ಮುಕುಲ್ ಚೌಧರಿ ಎಂಬ ಯುವ ವೇಗಿಯ ಅಬ್ಬರ.ಕೇವಲ 27 ಎಸೆತಗಳನ್ನು ಎದುರಿಸಿದ ಮುಕುಲ್, 7 ಭರ್ಜರಿ ಸಿಕ್ಸರ್ ಹಾಗೂ 2 ಬೌಂಡರಿಗಳ ನೆರವಿನಿಂದ ಅಜೇಯ 54 ರನ್ ಸಿಡಿಸಿದರು. ಅಂತಿಮ ಎಸೆತದಲ್ಲಿ ಗೆಲುವಿನ ರನ್ ಬಾರಿಸಿದ ಬಳಿಕ ಮುಕುಲ್ ಆಕಾಶದತ್ತ ನೋಡಿ ದೇವರಿಗೆ ಧನ್ಯವಾದ ಅರ್ಪಿಸಿದ ರೀತಿ ಮತ್ತು ಅವರ ಸಂಭ್ರಮಾಚರಣೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಗೆಲುವಿನ ಶ್ರೇಯವನ್ನು ಅವರು ತಮ್ಮ ನೆಚ್ಚಿನ ಆಟಗಾರ ಎಂ.ಎಸ್ ಧೋನಿಗೆ ಅರ್ಪಿಸಿದರು.
ಈ ಅದ್ಭುತ ಬ್ಯಾಟಿಂಗ್ ನಂತರ, ಮುಕುಲ್ ಅವರು ಎಂಎಸ್ ಧೋನಿಯಿಂದ ಸ್ಫೂರ್ತಿ ಪಡೆದಿರುವುದಾಗಿ ಬಹಿರಂಗಪಡಿಸಿದರು. “ಎಂಎಸ್ ಧೋನಿ ಪಂದ್ಯಗಳನ್ನು ಹೇಗೆ ಮುಗಿಸುತ್ತಾರೆ ಎಂಬುದನ್ನು ನಾನು ನೋಡುತ್ತಿದ್ದೆ. ನಾನು ಧೋನಿಯಂತೆ ಬ್ಯಾಟಿಂಗ್ ಮಾಡುತ್ತೇನೆ. ಅವರು ನನ್ನ ವೃತ್ತಿಜೀವನದ ಆರಂಭದಲ್ಲಿ ನನಗೆ ಸ್ಫೂರ್ತಿ ನೀಡಿದರು. ಈ ಗೆಲುವಿನ ಇನಿಂಗ್ಸ್ ಅವರಿಗೆ ಅರ್ಪಿಸುತ್ತೇನೆ” ಎಂದು ಪಂದ್ಯದ ಬಳಿಕ ಚೌಧರಿ ಹೇಳಿದರು.