ಚಿಕ್ಕಬಳ್ಳಾಪುರ : ತಂದೆ-ತಾಯಿಯನ್ನು ಕಳೆದುಕೊಂಡು ತನ್ನ 12ರ ವಯಸ್ಸಿನಲ್ಲಿಯೇ ಚಿಕ್ಕಬಳ್ಳಾಪುರ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸೇರಿದ್ದ ಅನಾಥ ವಿದ್ಯಾರ್ಥಿನಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಶೇ.90ರಷ್ಟು ಅಂಕ ಪಡೆದು ಸಾಧನೆ ಮಾಡಿದ್ದಾಳೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕುರಟಹಳ್ಳಿಯ ಲಾವಣ್ಯ ಎಂಬ ಹುಡುಗಿಯ ತಂದೆ ಶ್ರೀನಿವಾಸ್ 2019ರಲ್ಲಿ ಮೃತಪಟ್ಟಿದ್ದು, 2021ರಲ್ಲಿ ತಾಯಿ ಚಂದ್ರಕಲಾ ಕೊರೋನಾ ಸೋಂಕಿಗೆ ಬಲಿಯಾಗಿದ್ದರು. ಈಕೆಯ ತಾಯಿಯ ಅಂತ್ಯಸಂಸ್ಕಾರಕ್ಕೆ ಯಾರು ಬರದಿದ್ದಾಗ ಜೆಸಿಬಿ ಬಕೆಟ್ನಲ್ಲಿ ಶವ ಸಾಗಿಸಲಾಗಿತ್ತು.
ಪೋಷಕರನ್ನು ಕಳೆದುಕೊಂಡು ಅನಾಥವಾಗಿದ್ದ ಲಾವಣ್ಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸೇರಿದ್ದಳು. ಇಲ್ಲಿಂದಲೇ ಚಿಕ್ಕಬಳ್ಳಾಪುರದ ವಿಶ್ವವಿವೇಕ ಕಾಲೇಜಿನಲ್ಲಿ ಪಿಯುಸಿ ವ್ಯಾಸಾಂಗ ಮಾಡುತ್ತಿದ್ದಳು. ಗುರುವಾರ ಪ್ರಕಟವಾದ ಫಲಿತಾಂಶದಲ್ಲಿ 600ಕ್ಕೆ 541 ಅಂಕ ಪಡೆದು ಸಾಧನೆ ಮಾಡಿದ್ದಾಳೆ.
ಲಾವಣ್ಯಳಿಗೆ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ನೀಡಿದ ಮಾರ್ಗದರ್ಶನ ಸಹಕರಿಯಾಗಿದೆ. ಜೊತೆಗೆ ಬಾಲ್ಯದಲ್ಲಿ ಎದುರಾದ ಕಷ್ಟಗಳು ಆಕೆಯನ್ನು ಮಾನಸಿಕವಾಗಿ ಗಟ್ಟಿಯಾಗಿಸಿದೆ ಎಂದು ಹೇಳಬಹುದು.