ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಸಣ್ಣಪುಟ್ಟ ವಿಚಾರಗಳಿಗೂ ಯುವಜನತೆ ದುಡುಕಿನ ನಿರ್ಧಾರ ತೆಗೆದುಕೊಳ್ಳುತ್ತಿರುವುದು ನಿಜಕ್ಕೂ ಆತಂಕಕಾರಿ ಮತ್ತು ಮನಕಲಕುವ ವಿಷಯ. ಚಿಕ್ಕಬಳ್ಳಾಪುರ ಜಿಲ್ಲೆಯ ಪೆರೇಸಂದ್ರದಲ್ಲಿ ನಡೆದ ಈ ಘಟನೆ ಇಡೀ ಗ್ರಾಮವನ್ನೇ ಶೋಕ ಸಾಗರದಲ್ಲಿ ಮುಳುಗಿಸಿದೆ.
ಪೆರೇಸಂದ್ರ ಗ್ರಾಮದ ನಿವಾಸಿ ಶ್ರುತಿ (18) ಆತ್ಮಹತ್ಯೆಗೆ ಶರಣಾದ ಯುವತಿ.
ಯುವತಿಯ ಅತ್ತೆಯವರು “ಮನೆಯಲ್ಲಿ ಸುಮ್ಮನೆ ಇರುವ ಬದಲು ಅಡುಗೆ ಮಾಡುವುದನ್ನು ಕಲಿ ಅಮ್ಮ, ನನಗೂ ಕೆಲಸದಲ್ಲಿ ಸ್ವಲ್ಪ ಸಹಾಯವಾಗುತ್ತದೆ” ಎಂದು ಹಿತವಚನ ಹೇಳಿದ್ದರು.
ಅತ್ತೆಯ ಮಾತನ್ನು ತಪ್ಪಾಗಿ ಅರ್ಥೈಸಿಕೊಂಡ ಶ್ರುತಿ, ತೀವ್ರವಾಗಿ ಮನನೊಂದು ಮನೆಯಲ್ಲಿದ್ದ ವಿಷ ಸೇವಿಸಿದ್ದಾಳೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಸಾವನ್ನಪ್ಪಿದ್ದಾಳೆ.
ಈ ಘಟನೆಗೆ ಸಂಬಂಧಿಸಿದಂತೆ ಪೆರೇಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸಂಸಾರದ ಸಣ್ಣಪುಟ್ಟ ವೈಮನಸ್ಸಿಗೆ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವುದು ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಿಸಿದೆ.
ನಮ್ಮದೊಂದು ಮನವಿ:
ಜೀವನದಲ್ಲಿ ಎದುರಾಗುವ ಸಣ್ಣಪುಟ್ಟ ಅಡೆತಡೆಗಳು ಅಥವಾ ಹಿರಿಯರ ಸಲಹೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸೋಣ. ಕ್ಷಣಿಕ ಕೋಪ ಅಥವಾ ಬೇಸರಕ್ಕೆ ಅಮೂಲ್ಯವಾದ ಪ್ರಾಣವನ್ನು ಬಲಿ ಕೊಡಬೇಡಿ. ನಿಮ್ಮ ಪ್ರಾಣ ನಿಮ್ಮ ಕುಟುಂಬಕ್ಕೆ ಬಹಳ ಮುಖ್ಯ.