ಕೆ.ಆರ್. ಪುರ- ಉಚಿತ ತಪಾಸಣೆ, ರೋಗ ಪತ್ತೆಗೆ ಆರೋಗ್ಯ ಶಿಬಿರ ಸಹಕಾರಿಯಾಗಿದೆ ಎಂದು ಶಾಸಕ ಬೈರತಿ ಬಸವರಾಜ ತಿಳಿಸಿದರು.
ಎಸ್ ಕೆಎಫ್ ವತಿಯಿಂದ ಕಲ್ಕೆರೆಯಲ್ಲಿ ಹಮ್ಮಿಕೊಂಡಿದ್ದ ಬೃಹತ್ ಆರೋಗ್ಯ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು ಸಾರ್ವಜನಿಕರಲ್ಲಿ ಸಣ್ಣ ಪುಟ್ಟ ರೋಗ ಲಕ್ಷಣಗಳು ಕಂಡು ಬಂದಲ್ಲಿ ಸಮಸ್ಯೆಯ ಪ್ರಾಥಮಿಕ ಹಂತದಲ್ಲೇ ವೈದ್ಯರನ್ನು ಕಾಣಬೇಕು. ಜನರಿಗಾಗಿಯೇ ಇಂತಹ ಆರೋಗ್ಯ ಉಚಿತ ತಪಾಸಣೆ ಶಿಬಿರ ಆಯೋಜಿಸಿದ್ದು, ರೋಗ ಲಕ್ಷಣ ಇರುವವರು ಭಯ ಪಡದೇ ಇಂತಹ ಶಿಬಿರಗಳ ಸದುಪಯೋಗ ಪಡೆದು ಆರೋಗ್ಯವಂತರಾಗಬೇಕು ಎಂದು ಸಲಹೆ ನೀಡಿದರು.
ಬಡವರು ಆರ್ಥಿಕ ಸಂಕಷ್ಟದಿಂದ ಕಾಯಿಲೆ ಬಂದರೂ ಸಕಾಲದಲ್ಲಿ ಚಿಕಿತ್ಸೆ ಪಡೆಯುವುದಿಲ್ಲ. ಪರಿಣಾಮ ಕಾಯಿಲೆಗಳು ಉಲ್ಬಣಿಸುತ್ತವೆ. ಶಿಬಿರಗಳಲ್ಲಿ ಬಡವರಿಗೆ ಉಚಿತ ಸೇವೆ ಲಭಿಸುವುದರಿಂದ ಆರೋಗ್ಯರಕ್ಷಣೆಗೆ ಅನುಕೂಲವಾಗುತ್ತದೆ ಎಂದರು
ಎಸ್ ಕೆಎಪ್ ನಿಂದ ಆರೋಗ್ಯ ಶಿಬಿರ, ಕ್ರೀಡೆ, ಗಿಡ ನೆಡುವುದು ಸೇರಿದಂತೆ ಹಲವು ಸಾಮಾಜಿಕ ಮಾದರಿ ಕೆಲಸಗಳನ್ನು ಮಾಡುತ್ತಿದ್ದಾರೆ ಇದು ಶ್ಲಾಘನೀಯ ಕೆಲಸ ಎಂದರು.
ಕ್ಷೇತ್ರದ ಕಲ್ಕೆರೆ ಭಾಗದಲ್ಲಿ ಆರೋಗ್ಯ ತಪಾಸಣೆ ಶಿಬಿರ ಮಾಡಿರೋದು ಉತ್ತಮವಾದ ಕಾರ್ಯವಾಗಿದೆ . ಪ್ರತಿಯೊಬ್ಬರು ಈ ಉಚಿತ ಆರೋಗ್ಯ ಶಿಬಿರದ ಅನುಕೂಲವನ್ನು ಪಡೆದುಕೊಳ್ಳಿ ಎಂದರು.
ಎಸ್ ಕೆಎಫ್ ಅಧ್ಯಕ್ಷೆ ಶಾಂತಾಕೃಷ್ಣಮೂರ್ತಿ ಮಾತನಾಡಿ, ನಾವು ಜನರಸೇವೆ ಮಾಡುವ ಉದ್ದೇಶದಿಂದ ಕಳೆದ10 ವರ್ಷಗಳಿಂದ ಆರೋಗ್ಯಶಿಬಿರ, ಕ್ರೀಡೆ, ಸಸಿ ನೆಡುವುದು, ಉದ್ಯೋಗ ಮೇಳ, ಸೇರಿದಂತೆ ಎಲ್ಲಾ ರೀತಿಯ ಉಪಯುಕ್ತ ಕಾರ್ಯಕ್ರಮಗಳನ್ನುಮಾಡುತ್ತಾ ಬಂದಿದ್ದೇವೆ ಇದರಿಂದ ಈ ಭಾಗದ ನೂರಾರು ಜನರಿಗೆ ಉಪಯೋಗವಾಗಿದೆ ಎಂದರು.
ರಕ್ತದ ಒತ್ತಡ, ಮಧುಮೇಹದಂತಹ ಸಾಮಾನ್ಯ ಪರೀಕ್ಷೆಯಿಂದ ಹಿಡಿದು ಹೃದ್ರೋಗ, ಕಣ್ಣು, ಮೂಳೆ, ದಂತ , ಶಿಶು ರೋಗ, ಸ್ತ್ರೀರೋಗ, ಕಿವಿ, ಮೂಗು, ಚರ್ಮ, ಗಂಟಲು, ಮಾನಸಿಕ ಕಾಯಿಲೆ ಒಳಗೊಂಡಂತೆ ಹತ್ತು ಹಲವು ರೋಗಗಳಿಗೆ ಆರೋಗ್ಯ ಶಿಬಿರದಲ್ಲಿ ತಪಾಸಣೆ ಹಾಗೂ ಚಿಕಿತ್ಸೆ ನೀಡಲಾಯಿತು. ಸಾವಿರಾರು ಜನರು ಶಿಬಿರದ ಸದುಪಯೋಗ ಪಡೆದುಕೊಂಡರು ಎಂದರು.
ಶಾಸಕ ಬೈರತಿ ಬಸವರಾಜ ಅವರ ರೀತಿ ಸಮಾಜ ಸೇವೆಗಳನ್ನು ಮಾಡಿಕೊಂಡು ಬಂದಿದ್ದೇವೆ, ಜನರ ಮಧ್ಯೆ ಇದ್ದು ಕೆಲಸ ಮಾಡುವ ಹಂಬಲ ಹೊಂದಿದ್ದೇವೆ ಇದಕ್ಕೆ ಪ್ರತಿಯೊಬ್ಬರ ಸಹಕಾರ ಅತ್ಯಗತ್ಯ ಎಂದು ಹೇಳಿದರು.
ಶಿಬಿರದಲ್ಲಿ ಕ್ಷೇತ್ರದ ಮುಖಂಡರನ್ನ ಹಾಗೂ ಗ್ರಾಮದ ಹಿರಿಯರನ್ನ ಇದೇ ವೇಳೆ ಸನ್ಮಾನಿಸಲಾಯಿತು. ತಿಂಡಿ ಹಾಗೂ ಊಟದ ವ್ಯವಸ್ಥೆಯನ್ನು ಸಹ ಮಾಡಲಾಗಿತ್ತು.ನೂರಾರು ಬಡ ಜನ ಸದುಪಯೋಗ ಪಡೆದುಕೊಂಡರು.
ಈ ಸಂದರ್ಭದಲ್ಲಿ ಎಸ್ ಕೆಎಫ್ ಮುಖ್ಯಸ್ಥ ಕಲ್ಕೆರೆ ಕೃಷ್ಣಮೂರ್ತಿ, ಮಂಡಲ ಅಧ್ಯಕ್ಷ ಮುನೇಗೌಡ, ಪ್ರಧಾನ ಕಾರ್ಯದರ್ಶಿ ಲೋಕೇಶ್ ಮುಖಂಡರಾದ ಮಾದೇಶಣ್ಣ, ಮಧು, ಆನಂದ್ , ಭಾಗ್ಯಮ್ಮ ಮತ್ತಿತರರಿದ್ದರು.
