ಬೆಂಗಳೂರು: ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೊನ ಪಂದ್ಯದ ಟಿಕೆಟ್ ಅನ್ನು ಪಡೆಯಲು ಹೋದ ಟೆಕ್ಕಿಯೊಬ್ಬರಿಗೆ ಪಂಗನಾಮ ಹಾಕಲಾಗಿದೆ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ RCB vs CSK ಐಪಿಎಲ್ ಪಂದ್ಯಕ್ಕೆ ಸಂಬಂಧಿಸಿದಂತೆ ಬಿ.ನಾರಾಯಣಪುರ ನಿವಾಸಿಯಾದ 25 ವರ್ಷದ ಟೆಕ್ಕಿ ಒಬ್ಬರು ಆನ್ಲೈನ್ ಮೋಸಕ್ಕೆ ಒಳಗಾಗಿ 1.46 ಲಕ್ಷ ರೂ. ಕಳೆದುಕೊಂಡಿದ್ದರ ಬಗ್ಗೆ ಮಹದೇವಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಇನ್ಸ್ಟಾಗ್ರಾಮ್ನಲ್ಲಿ ಪರಿಚಯವಾದ ವ್ಯಕ್ತಿ ಟಿಕೆಟ್ ಮಾರಾಟಗಾರನಂತೆ ನಟಿಸಿ ವಂಚಿಸಿದ್ದಾನೆ ಎಂದು ಆರೋಪಿಸಿದ್ದಾರೆ.
ತನ್ನನ್ನು ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಟಿಕೆಟ್ ಕೌಂಟರ್ ಹಿರಿಯ ಮೇಲ್ವಿಚಾರಕ ಸುಮಿತ್ ಬಿಸ್ವಾಲ್ ಎಂದು ಪರಿಚಯಿಸಿಕೊಂಡ ಆರೋಪಿಯು, ಐಪಿಎಲ್ ಪಂದ್ಯಕ್ಕೆ ಟಿಕೆಟ್ಗಳ ಜೊತೆಗೆ ಊಟದ ಕೂಪನ್ಗಳು ಮತ್ತು ವಿಶೇಷ ಸೌಲಭ್ಯಗಳನ್ನು ಒದಗಿಸುವುದಾಗಿ ನಂಬಿಕೆ ಮೂಡಿಸಿದ್ದ. ಆರಂಭದಲ್ಲಿ ಎರಡು ಟಿಕೆಟ್ಗಳಿಗೆ 3,700 ರೂ. ದರ ನಿಗದಿ ಮಾಡಿದ್ದರೂ, ನಂತರ ಭದ್ರತಾ ಠೇವಣಿ, ಹೆಚ್ಚುವರಿ ಐಡಿ ಕಾರ್ಡ್ ಹಾಗೂ ಫುಡ್ ಕೂಪನ್ ಹೆಸರಿನಲ್ಲಿ ಹಂತ ಹಂತವಾಗಿ ಹಣ ಕೇಳಿದ್ದ. ಪಂದ್ಯದ ದಿನ ಗೇಟ್ ನಂ.10 ಬಳಿ ಬರಲು ಹೇಳಿ, ನಕಲಿ ಇಮೇಲ್ ದೃಢೀಕರಣವನ್ನೂ ಕಳುಹಿಸಿದ್ದ ಎಂದು ನೊಂದ ವ್ಯಕ್ತಿ ಹೇಳಿದ್ದಾರೆ.
ಹಣ ಪಾವತಿಯ ನಂತರ, ವಂಚಕನು ಟೆಕ್ಕಿಗೆ ಸ್ಟೇಡಿಯಂನ ಗೇಟ್ ಸಂಖ್ಯೆ 10ರ ಬಳಿ ಬರಲು ಸೂಚಿಸಿದ್ದಾನೆ. ಅಲ್ಲಿಗೆ ತಲುಪಿದಾಗ, ಟೆಕ್ಕಿ ಕನಿಷ್ಠ ದರದ ಟಿಕೆಟ್ಗಳನ್ನು ಕೇಳಿದ್ದಾರೆ. ಆದರೆ, ವಂಚಕನು ಕೂಪನ್ಗಳು ಮತ್ತು ಭದ್ರತಾ ಠೇವಣಿ ಹೆಸರಿನಲ್ಲಿ ಹೆಚ್ಚಿನ ಹಣವನ್ನು ವಸೂಲಿ ಮಾಡಿದ್ದಾನೆ. ಬೇರೆ ಬೇರೆ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು ₹ 1.46 ಲಕ್ಷ ರೂ. ಹಣವನ್ನು ಟೆಕ್ಕಿಯಿಂದ ವರ್ಗಾಯಿಸಿಕೊಂಡಿದ್ದಾನೆ.
ವಂಚನೆ ಬಳಿಕ ಟೆಕ್ಕಿ, ತಕ್ಷಣವೇ ಸೈಬರ್ ಕಂಟ್ರೋಲ್ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ನಂತರ ಮಹದೇವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ