Tuesday, May 19, 2026
Home ಅಪರಾಧ ಸುದ್ದಿಬೇರೆಯವನ ಜೊತೆ ಓಡಿ ಹೋದ ಪತ್ನಿ : ಇಬ್ಬರು ಮಕ್ಕಳನ್ನು ಕೊಂದು ನೇಣಿಗೆ ಶರಣಾದ ಪತಿ.

ಬೇರೆಯವನ ಜೊತೆ ಓಡಿ ಹೋದ ಪತ್ನಿ : ಇಬ್ಬರು ಮಕ್ಕಳನ್ನು ಕೊಂದು ನೇಣಿಗೆ ಶರಣಾದ ಪತಿ.

ಸುಂದರ ಸಂಸಾರಕ್ಕೆ ಕೊಳ್ಳಿ ಇಟ್ಟ ಅಕ್ಕನ ಮಗ.

by Dharmaraju
0 comments

ತುಮಕೂರು: ಜಿಲ್ಲೆಯ ಕುಣಿಗಲ್ ತಾಲೂಕಿನ ಆಲ್ಕೆರೆ ಗ್ರಾಮದಲ್ಲಿ ನಡೆದ ಈ ಘಟನೆ ನಾಗರಿಕ ಸಮಾಜವೇ ತಲೆತಗ್ಗಿಸುವಂತಿದೆ. ಅಕ್ಕನ ಮಗನನ್ನೇ ಮಗನಂತೆ ಸಾಕಿದ ಮಾವನಿಗೆ ಆತ ಕೊಟ್ಟ ದ್ರೋಹ ಮತ್ತು ಪತ್ನಿಯ ಅನೈತಿಕ ಸಂಬಂಧ, ಕೊನೆಗೆ ಇಬ್ಬರು ಹಸುಗೂಸುಗಳು ಸೇರಿದಂತೆ ಒಟ್ಟು ಮೂವರ ಬಲಿಗೆ ಕಾರಣವಾಗಿದೆ.

ಮಗನಂತಿದ್ದ ಅಕ್ಕನ ಮಗನೇ ವಿಲನ್!

ಮೃತ ಶಿವಣ್ಣ ಅವರ ಅಕ್ಕ ಮರಣ ಹೊಂದಿದಾಗ, ಅನಾಥನಾಗಿದ್ದ ಅಕ್ಕನ ಮಗ ಹೇಮಂತ್‌ನನ್ನು ಶಿವಣ್ಣ ತನ್ನ ಮನೆಗೆ ಕರೆತಂದಿದ್ದರು. ಸ್ವಂತ ಮಗನಿಗಿಂತ ಮಿಗಿಲಾಗಿ ಪ್ರೀತಿ ನೀಡಿ, ಆಶ್ರಯ ನೀಡಿ ಸಾಕಿದ್ದರು. ಆದರೆ ಹೇಮಂತ್ ಬೆಳೆಯುತ್ತಾ ತನ್ನನ್ನು ಸಾಕಿದ ಮಾವನ ಸಂಸಾರಕ್ಕೇ ಕೊಳ್ಳಿ ಇಡಲು ಮುಂದಾದ. ಮಾವನ ಪತ್ನಿ ಕಾವ್ಯ ಜೊತೆ ಅಕ್ರಮ ಸಂಬಂಧ ಬೆಳೆಸಿ, ಆಕೆಯ ಮನಸ್ಸನ್ನು ಪೂರ್ತಿಯಾಗಿ ಬದಲಿಸಿದ್ದ.

ಹಲವು ಬಾರಿ ನಡೆದ ಸಂಧಾನ:

ಶಿವಣ್ಣನಿಗೆ ಪತ್ನಿ ಮತ್ತು ಅಕ್ಕನ ಮಗನ ನಡುವಿನ ಅಕ್ರಮ ಸಂಬಂಧದ ವಿಷಯ ತಿಳಿಯುತ್ತಿದ್ದಂತೆ ಅವರು ತೀವ್ರ ಆಘಾತಕ್ಕೊಳಗಾಗಿದ್ದರು. ಒಮ್ಮೆ ಈ ವಿಚಾರವಾಗಿ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೂ ಯತ್ನಿಸಿದ್ದರು. ಆಗ ಗ್ರಾಮದ ಹಿರಿಯರು ಪಂಚಾಯಿತಿ ನಡೆಸಿ, ಹೇಮಂತನನ್ನು ಮನೆಯಿಂದ ಹೊರಹಾಕುವಂತೆ ತಿಳಿಸಿ, “ಇನ್ನಾದರೂ ಮಕ್ಕಳಿಗಾಗಿ ಅನ್ಯೋನ್ಯವಾಗಿ ಬದುಕಿ” ಎಂದು ದಂಪತಿಗಳಿಗೆ ಬುದ್ಧಿ ಹೇಳಿ ಒಂದಾಗಿಸಿದ್ದರು.

ಕ್ಷಮೆ ಕೇಳಿ ನಾಟಕವಾಡಿದ ಪತ್ನಿ:

ಕೆಲ ದಿನಗಳ ಹಿಂದೆ ಕಾವ್ಯ ತನ್ನ ಪ್ರಿಯಕರ ಹೇಮಂತ್ ಜೊತೆ ಓಡಿ ಹೋಗಿದ್ದಳು. ಈ ಬಗ್ಗೆ ಶಿವಣ್ಣ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ಆಕೆಯನ್ನು ಪತ್ತೆಹಚ್ಚಿ ಕರೆತಂದಾಗ, ಪೊಲೀಸರ ಮುಂದೆ ಕಣ್ಣೀರು ಹಾಕಿ, “ನನ್ನಿಂದ ತಪ್ಪಾಗಿದೆ, ಇನ್ನು ಮುಂದೆ ಗಂಡ-ಮಕ್ಕಳ ಜೊತೆ ಚೆನ್ನಾಗಿರುತ್ತೇನೆ” ಎಂದು ನಾಟಕವಾಡಿ ಮನೆಗೆ ಮರಳಿದ್ದಳು. ಪತ್ನಿ ಸುಧಾರಿಸಿಕೊಂಡಳು ಎಂದು ನಂಬಿದ ಶಿವಣ್ಣ ಆಕೆಯನ್ನು ಪ್ರೀತಿಯಿಂದಲೇ ಬರಮಾಡಿಕೊಂಡಿದ್ದರು.

ಮನೆ ದೋಚಿ ಪರಾರಿಯಾದ ‘ಕಿಲ್ಲರ್’ ಪತ್ನಿ

ಮನೆಗೆ ಮರಳಿದ ಕಾವ್ಯಳ ಉದ್ದೇಶ ಸುಧಾರಿಸುವುದಾಗಿರಲಿಲ್ಲ. ಮರುದಿನವೇ ಶಿವಣ್ಣ ಕೆಲಸಕ್ಕೆ ಹೋದ ಸಮಯ ಸಾಧಿಸಿದ ಆಕೆ, ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ನಗದನ್ನು ದೋಚಿಕೊಂಡು ಮತ್ತೆ ಅದೇ ಹೇಮಂತ್ ಜೊತೆ ಓಡಿ ಹೋದಳು. ಸಂಜೆ ಮನೆಗೆ ಬಂದ ಶಿವಣ್ಣನಿಗೆ ಪತ್ನಿಯ ಈ ಎರಡನೇ ದ್ರೋಹ ಅರಗಿಸಿಕೊಳ್ಳಲಾಗಲಿಲ್ಲ.

ಮಕ್ಕಳನ್ನು ಕೊಂದು ಸಾವಿಗೆ ಶರಣಾದ ತಂದೆ:

ನಂಬಿದ ಅಕ್ಕನ ಮಗನಿಂದ ದ್ರೋಹ, ಪತ್ನಿಯಿಂದ ಅವಮಾನ ಹಾಗೂ ತಾನು ಮಗನಂತೆ ಸಾಕಿದವನಿಂದಲೇ ಸಂಸಾರ ಹಾಳಾದ ನೋವು ಶಿವಣ್ಣನನ್ನು ಕ್ರೂರ ನಿರ್ಧಾರಕ್ಕೆ ದೂಡಿತು. ತನ್ನಿಬ್ಬರು ಮುದ್ದಾದ ಗಂಡು ಮಕ್ಕಳಾದ ಜೀವನ್ (10) ಮತ್ತು ಪ್ರಾಣೇಶ್ (5) ಅವರನ್ನು ಕೈಯಾರೆ ಉಸಿರುಗಟ್ಟಿಸಿ ಸಾಯಿಸಿದರು.
ಮಕ್ಕಳ ಮೃತದೇಹದ ಪಕ್ಕದಲ್ಲೇ ತಾವೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡರು.

ಗ್ರಾಮದಲ್ಲಿ ಶೋಕಸಾಗರ:

ಸದ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಒಂದು ಅಕ್ರಮ ಸಂಬಂಧ ಮತ್ತು ನಂಬಿಕೆ ದ್ರೋಹವು ಒಂದು ಸುಂದರ ಸಂಸಾರವನ್ನು ಹೇಗೆ ಸ್ಮಶಾನವಾಗಿಸಬಹುದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಪರಾರಿಯಾಗಿರುವ ಕಾವ್ಯ ಮತ್ತು ಹೇಮಂತ್‌ಗಾಗಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

You may also like

Leave a Comment