ಕೆ.ಆರ್.ಪೇಟೆ: ತಾಯಿ ಮನೆ ಬಿಟ್ಟು ಹೋದಳೆಂದು ಮನನೊಂದು ವಿಷ ಸೇವಿಸಿ ಆತ್ಮ*ತ್ಯೆ ಮಾಡಿಕೊಂಡ ಮಗ. ಮಗನ ಅಂತ್ಯಕ್ರಿಯೆ ಮುಗಿದ ಮರುದಿನವೇ ಕಬ್ಬಿನ ಗದ್ದೆಯಲ್ಲಿ ತಾಯಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಹೃದಯ ವಿದ್ರಾವಕ ಘಟನೆ ಕೆ.ಆರ್.ಪೇಟೆ ತಾಲ್ಲೂಕಿನ ಬೂಕಹಳ್ಳಿ ಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಬೂಕಹಳ್ಳಿಕೊಪ್ಪಲು ಗ್ರಾಮದ ಹುಚ್ಚೇಗೌಡರ ಪತ್ನಿ ಮಹದೇವಮ್ಮ(75) ಮತ್ತು ಈಕೆಯ ಮಗ ಸುಭಾಷ್( 50) ಮೃತಪಟ್ಟಿರುವ ದುರ್ದೈವಿ ತಾಯಿ- ಮಗ ಎಂದು ಮಾಹಿತಿ ತಿಳಿದು ಬಂದಿದೆ.
ಘಟನೆ ವಿವರ:
ಕಳೆದ 11ದಿನಗಳ ಹಿಂದೆ ಮಹಾದೇವಮ್ಮ ಮನೆಬಿಟ್ಟು ಹೋಗಿದ್ದರು. ಮನೆಯವರು ಪೋಲೀಸ್ ಠಾಣೆಯಲ್ಲಿ ತಮ್ಮ ತಾಯಿ ಕಾಣೆಯಾಗಿದ್ದು ಹುಡುಕಿ ಕೊಡುವಂತೆ ದೂರು ನೀಡಿದ್ದರು. ತಮ್ಮ ತಾಯಿ ವಾರವಾದರೂ ಪತ್ತೆಯಾಗಲಿಲ್ಲ ಎಂದು ಮನನೊಂದು ಮಗ ಸುಭಾಷ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದನು. ಆತನ ಅಂತ್ಯಸಂಸ್ಕಾರ ನಡೆಸಿ ಮನೆಗೆ ಬಂದ ಮಾರನೇ ದಿನ ಸುಭಾಷ್ ತಾಯಿ ಮಹಾದೇವಮ್ಮನ ಶವವು ಕನಿಷ್ಠ 10ದಿನಗಳ ಹಿಂದೆಯೇ ಗ್ರಾಮದ ಕಬ್ಬಿನಗದ್ದೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು ಈಕೆಯ ಶವವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಈ ಘಟನೆಯಿಂದ ಕುಟುಂಬದವರಿಗೆ ಬರಸಿಡಿಲು ಬಡಿದಂತ ನೋವುಂಟಾಗಿದೆ. ಎರಡೂ ಘಟನೆ ಕುರಿತು ಕೆ.ಆರ್.ಪೇಟೆ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.